ನಂಜನಗೂಡು: ತಾಲ್ಲೂಕಿನ ಕೂಗಲೂರು ಗ್ರಾಮದ ಹೊರ ವಲಯದ ಹತ್ತಿ ಹೊಲದಲ್ಲಿ ಭಾನುವಾರ ಬೆಳಿಗ್ಗೆ ರೈತರಿಗೆ ಚಿರತೆ ಕಾಣಿಸಿಕೊಂಡಿದೆ.
ಹತ್ತಿ ಹೊಲದಿಂದ ರಸ್ತೆಯ ಕಡೆಗೆ ಬರುತ್ತಿದ್ದ ಚಿರತೆಯನ್ನು ಗಮನಿಸಿದ ರೈತರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಲೋಕೇಶ್ಮೂರ್ತಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿರತೆ ಹೆಜ್ಜೆ ಗುರುತು ಪತ್ತೆ ಹಚ್ಚಿದರು.
‘ಸುಮಾರು ಏಳು ವರ್ಷದ ಚಿರತೆ ಇದಾಗಿದ್ದು, ಆಹಾರ ಅರಸಿ ಗ್ರಾಮಕ್ಕೆ ಬಂದಿದೆ. ಜಮೀನಿನ ಸಮೀಪವೇ ಚಿರತೆ ಸೆರೆಗೆ ಬೋನು ಇಡಲಾಗಿದ್ದು, ಸಿಬ್ಬಂದಿ ಕಾವಲು ಇರುತ್ತಾರೆ. ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಲೋಕೇಶ್ ಮೂರ್ತಿ ತಿಳಿಸಿದರು.