ಮೈಸೂರು: ‘ಅಜ್ಞಾನದ ಕತ್ತಲೆಗೆ ಅಕ್ಷರದ ಬೆಳಕು ಚೆಲ್ಲಿದವರು ಡಿ.ಬನುಮಯ್ಯ’ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಬಣ್ಣಿಸಿದರು.
ನಗರದ ಬನುಮಯ್ಯ ಕಾಲೇಜಿನ ಆವರಣದಲ್ಲಿ ದಿ.ಡಿ.ಬನುಮಯ್ಯ ಜನ್ಮ ದಿನದ ನೆನಪಿನಾರ್ಥ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ‘ಸಾಮಾಜಿಕ ನ್ಯಾಯದ ಬೀಜ ಬಿತ್ತಿದ ಬನುಮಯ್ಯ, ಆರ್ಥಿಕವಾಗಿ ಹಿಂದುಳಿದ ಅಕ್ಷರ ವಂಚಿತ ಅಜ್ಞಾನದ ಕತ್ತಲೆಯಲ್ಲಿದ್ದವರಿಗೆ ಅಕ್ಷರದ ಬೆಳಕು ಚೆಲ್ಲಿದವರು’ ಎಂದು ಹೇಳಿದರು.
‘ಮೈಸೂರು ಸಂಸ್ಥಾನದಲ್ಲಿ ಮೀಸಲಾತಿಗಾಗಿ ಮಿಲ್ಲರ್ ಆಯೋಗ ರಚಿಸಲು ಬನುಮಯ್ಯ ಕಾರಣೀಭೂತರು. ಸಂತೆಪೇಟೆಯಲ್ಲಿ ವ್ಯಾಪಾರ ಮಾಡಿ ಗಳಿಸಿದ್ದನ್ನು, ತನ್ನ ಕುಟುಂಬಕ್ಕಾಗಿ, ಸ್ವಾರ್ಥಕ್ಕಾಗಿ ವಿನಿಯೋಗಿಸದೆ ಸಾಮಾಜಿಕ ಹಾಗೂ ಶಿಕ್ಷಣ ಕ್ರಾಂತಿಗಾಗಿ ಮೀಸಲಿಟ್ಟಿದ್ದು ಶ್ಲಾಘನಾರ್ಹ’ ಎಂದರು.
‘ರಾಜ್ಯದ ಏಕೀಕರಣ ಪೂರ್ವದಲ್ಲೇ ಖಾಸಗಿ ಶಾಲೆ ಆರಂಭಿಸಿ, ಗ್ರಾಮೀಣ ಬಡ ಕುಟುಂಬಗಳು ಹಾಗೂ ಕಡಿಮೆ ಅಂಕ ತೆಗೆದ ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಿದರು. ಅವರು ನೀರೆರೆದು ಪೋಷಿಸಿದ ಸಂಸ್ಥೆಯಲ್ಲಿ ನೂರಾರು ಸಾಧಕರು ಹೊರಹೊಮ್ಮಿದ್ದನ್ನು ಮರೆಯುವಂತಿಲ್ಲ. ನಾನು ಸಹ ಈ ಕಾಲೇಜಿನ ವಿದ್ಯಾರ್ಥಿ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.
ಸಂಘದ ಅಧ್ಯಕ್ಷ ಎಂ.ಪಿ.ನಾಗರಾಜು, ಕಾರ್ಯದರ್ಶಿ ಯೋಗೇಶ್, ಪದಾಧಿಕಾರಿಗಳಾದ ಸಿ.ಕೆ.ಗಣೇಶ್, ವಿಕ್ರಮ್ ಮಹದೇವ್, ಪ್ರವೀಣ್ ಬನುಮಯ್ಯ, ವಿ.ರವಿ, ದೀಪಕ್, ಸತೀಶ್, ರವೀಶ್, ರಾಕೇಶ್, ಮೇಘಾ, ವಿಕ್ರಂ ಅಯ್ಯಂಗಾರ್ ಉಪಸ್ಥಿತರಿದ್ದರು.