ಮೈಸೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ತರಕಾರಿಗಳ ಬೆಲೆಗಳು ಕುಸಿತ ಕಂಡಿವೆ. ಬಹಳಷ್ಟು ತರಕಾರಿಗಳ ಸಗಟು ಬೆಲೆಗಳು ಶೇ 50ಕ್ಕೂ ಹೆಚ್ಚು ಕಡಿಮೆಯಾಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.
ಇದಕ್ಕೆ ಸಮಾನಂತರವಾಗಿ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಇದರಿಂದ ಗ್ರಾಹಕರಿಗೆ ಬೆಲೆ ಕುಸಿತದ ಲಾಭ ದಕ್ಕಿಲ್ಲ.
ಕಳೆದ ವಾರ ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಬೀನ್ಸ್ನ ಸಗಟು ಬೆಲೆ ಕೆ.ಜಿಗೆ ₹ 34 ಇತ್ತು. ಈಗ ಇದರ ದರ ₹ 16ಕ್ಕೆ ಕಡಿಮೆಯಾಗಿದೆ. ₹ 27ರಲ್ಲಿದ್ದ ಹಸಿಮೆಣಸಿನಕಾಯಿ ದರವು ₹ 15ಕ್ಕೆ ಕುಸಿದಿದೆ. ₹ 27ರಲ್ಲಿದ್ದ ಎಲೆಕೋಸಿನ ದರವು ₹ 15ಕ್ಕೆ ಇಳಿಕೆಯಾಗಿದೆ.
ಬಿಸಿಲಿನ ಪ್ರಕೋಪ ಕಳೆದ 15 ದಿನಗಳಿಂದ ಕಡಿಮೆಯಾಗಿರುವುದರಿಂದ ಸಹಜವಾಗಿಯೇ ತರಕಾರಿ ಸಸಿಗಳಲ್ಲಿ ಇಳುವರಿ ಅಧಿಕಗೊಂಡಿದೆ. ಕೇರಳ ಭಾಗದ ವರ್ತಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗದಿರುವುದೂ ಇದಕ್ಕೆ ಕಾರಣ ಎನಿಸಿದೆ ಎಂದು ತರಕಾರಿ ವ್ಯಾಪಾರಿ ಶಿವಲಿಂಗು ಹೇಳುತ್ತಾರೆ.
ಚೇತರಿಕೆ ಕಾಣದ ಕೋಳಿಮಾಂಸದ ಬೆಲೆ
ಈ ವಾರ ಕೋಳಿಮಾಂಸದ ಸಗಟು ಬೆಲೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಆದರೆ, ಚಿಲ್ಲರೆ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಆಗಿಲ್ಲ.
ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮಸ್ ಅಂಡ್ ಬ್ರೀಡರ್ಸ್ ಅಸೋಸಿಯೇಷನ್ನ ಬ್ರಾಯ್ಲರ್ ಕೋಳಿ ಮಾಂಸದ ದರ ಕೆ.ಜಿಗೆ ₹ 65 ಇದ್ದದ್ದು ₹ 66ಕ್ಕೆ ಅಲ್ಪ ಏರಿಕೆ ಕಂಡಿದ್ದರೆ, ಪೇರೆಂಟ್ ಕೋಳಿ ಮಾಂಸದ ದರ ಕೆ.ಜಿಗೆ ₹ 75ರಿಂದ ₹ 60ಕ್ಕೆ ಕಡಿಮೆಯಾಗಿದೆ.