ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25,600 ಟನ್ ರಸಗೊಬ್ಬರ ವಿತರಿಸುವ ಗುರಿ

ರಾಜ್ಯದ ತಂಬಾಕು ಬೆಳೆಗಾರರಿಗೆ 2 ಲಕ್ಷ ಸಸಿಗಳ ವಿತರಣೆಗೆ ಸಿದ್ಧತೆ: ಬಿ.ಮಂಜುರಾಜು
Last Updated 21 ಮೇ 2019, 20:01 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ರಾಜ್ಯದ ನೋಂದಾಯಿತ ತಂಬಾಕು ಬೆಳೆಗಾರರಿಗೆ ಈ ಸಾಲಿನಲ್ಲಿ 25,600 ಟನ್ ರಸಗೊಬ್ಬರ ವಿತರಿಸುವ ಗುರಿ ಹೊಂದಲಾಗಿದೆ ಎಂದು ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಬಿ.ಮಂಜುರಾಜು ತಿಳಿಸಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶೇ 80ರಷ್ಟು ತಂಬಾಕು ಬೆಳೆಗಾರರಿಗೆ ಈಗಾಗಲೇ ರಸಗೊಬ್ಬರ ವಿತರಣೆ ಮಾಡಲಾಗಿದೆ. ರಸಗೊಬ್ಬರಕ್ಕಾಗಿ ಮುಂಗಡ ಹಣ ಪಾವತಿಸಿರುವ ಬೆಳೆಗಾರರು ಮೇ ಅಂತ್ಯದಲ್ಲಿ ರಸಗೊಬ್ಬರ ಪಡೆದುಕೊಳ್ಳಬಹುದು. ಕಳೆದ ಸಾಲಿನಲ್ಲಿ 8.5 ಕೋಟಿ ಕೆ.ಜಿ ತಂಬಾಕು ಮಾರಾಟವಾಗಿದ್ದು, ಪ್ರತಿ ಕೆ.ಜಿ.ಗೆ ಸರಾಸರಿ ₹139.41 ದರ ದೊರಕಿದೆ’ ಎಂದು ಮಾಹಿತಿ ನೀಡಿದರು.

ಪ್ರಸಕ್ತ ಸಾಲಿನ ತಂಬಾಕು ಬೆಳೆಗಾರರ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮೇ 24 ರವರೆಗೆ ದಂಡವಿಲ್ಲದೆ ನೋಂದಣಿ ಮಾಡಿಸಬಹುದು. ಜೂನ್‌ 7 ರವರೆಗೆ ₹100 ದಂಡ ಶುಲ್ಕಸಹಿತ ಹಾಗೂ ಜೂನ್‌ 8ರಿಂದ 17ರವರೆಗೆ ₹400 ದಂಡ ಶುಲ್ಕ ಪಾವತಿಸಿ ನೋಂದಣಿ ಮಾಡಿಸಬಹುದು ಎಂದು ತಿಳಿಸಿದರು.

ಪ್ರತಿ ವರ್ಷ ಕನಿಷ್ಠ ಹತ್ತು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂಬ ಉದ್ದೇಶದಿಂದ ತಂಬಾಕು ಮಂಡಳಿಯಿಂದ ಪ್ರತಿ ಬೆಳೆಗಾರನಿಗೆ ತಲಾ 10 ಗಿಡಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ವರ್ಷ ರಾಜ್ಯದ ತಂಬಾಕು ಬೆಳೆಗಾರರಿಗೆ 2 ಲಕ್ಷ ಸಸಿಗಳನ್ನು ವಿತರಿಸಲು ಉದ್ದೇಶಿಸಲಾಗಿದೆ. ಇನ್ನೂ ಹೆಚ್ಚಿನ ಗಿಡಗಳು ಬೇಕಿದ್ದರೆ ಸಮೀಪದ ಅರಣ್ಯ ಇಲಾಖೆ ಕಚೇರಿಯಲ್ಲಿ ಪಡೆಯಬಹುದು ಎಂದರು.

ರೈತ ಕ್ಷೇಮಾಭಿವೃದ್ಧಿ ಯೋಜನೆಯಡಿ ತಂಬಾಕು ಬೆಳೆಗಾರರಿಗೆ ಹಲವು ಸವಲತ್ತುಗಳನ್ನು ಕಲ್ಪಿಸಲಾಗಿದೆ. ಸಹಜ ಸಾವು ಸಂಭವಿಸಿದರೆ ₹50 ಸಾವಿರ, ಅಪಘಾತದಿಂದ ಮೃತಪಟ್ಟರೆ ₹1 ಲಕ್ಷ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡಲಾಗುವುದು. ಸಮೂಹ ಅಪಘಾತ ವಿಮೆ ಜಾರಿಯಲ್ಲಿದ್ದು, ವಾರ್ಷಿಕ ಸಿಂಗಲ್ ಬ್ಯಾರನ್‌ಗೆ ₹321 ಹಾಗೂ ಡಬಲ್ ಬ್ಯಾರನ್‌ಗೆ ₹520 ಪಾವತಿಸಬೇಕಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ತಂಬಾಕು ಮಂಡಳಿಯ ಹರಾಜು ಅಧೀಕ್ಷಕರಾದ ಮಹದೇವಯ್ಯ, ಗೋಪಾಲ್, ಕೆ.ಎಸ್.ಮಂಜುನಾಥ್, ಅಮಲಾ ಡಿ. ಶ್ಯಾಮ್ ಹಾಜರಿದ್ದರು.

‘ಬೆಳೆ ಬಗ್ಗೆ ಆಗಸ್ಟ್‌ನೊಳಗೆ ಮಾಹಿತಿ ನೀಡಿ’

ರಾಜ್ಯದಲ್ಲಿ ಉತ್ಪಾದನೆಯಾಗುವ ತಂಬಾಕಿನಲ್ಲಿ ಶೇ 85ರಷ್ಟು ವಿದೇಶಗಳಿಗೆ ರಫ್ತಾಗುತ್ತಿದೆ. ರಾಜ್ಯದಲ್ಲಿ ಎಷ್ಟು ತಂಬಾಕು ಉತ್ಪಾದನೆಯಾಗಲಿದೆ ಎಂಬ ಮಾಹಿತಿಯನ್ನು ವಿದೇಶಿ ಖರೀದಿದಾರ ಕಂಪನಿಗಳಿಗೆ ಆಗಸ್ಟ್‌ನಲ್ಲಿ ನೀಡಬೇಕಿದೆ. ಹೀಗಾಗಿ, ರಾಜ್ಯದ ತಂಬಾಕು ಬೆಳೆಗಾರರು ತಮ್ಮ ಜಮೀನುಗಳಲ್ಲಿ ಬೆಳೆಯುವ ತಂಬಾಕಿನ ಅಂದಾಜು ಉತ್ಪಾದನೆ ಬಗ್ಗೆ ಆಗಸ್ಟ್‌ನೊಳಗೆ ಮಾಹಿತಿ ನೀಡಬೇಕು ಎಂದು ಬಿ.ಮಂಜುರಾಜು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT