ಮೈಸೂರು: ಕನ್ನಡ ಶಾಲೆಗಿಂತ ಸ್ಮಾರಕ ದೊಡ್ಡದ್ದಲ್ಲ ಎಂದು ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ ತಿಳಿಸಿದ್ದಾರೆ.
ಎನ್ ಟಿ ಎಂ ಎಸ್ ಶಾಲೆಯನ್ನು ಕೆಡವಿ ವಿವೇಕ ಸ್ಮಾರಕ ಕಟ್ಟಲೇಬೇಕೆಂದು ಹಟ ಹಿಡಿದು ಕುಳಿತಿರುವ ರಾಮಕೃಷ್ಣ ಆಶ್ರಮದ ಸ್ವಾಮಿಗಳು ಮತ್ತು ಅವರ ಬೆಂಬಲಿಗರಿಗೆ ವಿವೇಕಾನಂದರ ಹೋರಾಟ ಉದ್ದೇಶ ಮತ್ತು ಆಶಯಗಳು ಅರ್ಥವಾಗಿಯೇ ಇಲ್ಲ ಎಂದು ಅವರು ಟೀಕಿಸಿದ್ದಾರೆ.
ಆದ್ದರಿಂದಲೇ ಅವರು ಮಕ್ಕಳು ಶಿಕ್ಷಣ ಪಡೆಯುವ ಶಾಲೆ ಉರುಳಿಸಿ, ಬಲಿತ ಜನ ನೋಡುವ ಸ್ಮಾರಕ ಎಂಬ ಕಟ್ಟಡಕ್ಕಾಗಿ ಚೀರಾಡುತ್ತಿದ್ದಾರೆ ಎಂದು ಅವರು ಖಂಡಿಸಿದ್ದಾರೆ.
ಚಾಮರಾಜೇಂದ್ರ ಒಡೆಯರ್ ಮತ್ತು ಮಹಾರಾಣಿ ವಾಣಿ ವಿಲಾಸ ಸನ್ನಿದಾನ ಇವರ ದೃಢ ನಿರ್ಧಾರದ ಫಲವೇ ಈ ಶಾಲೆ. ಹೀಗೆ ಆರಂಭಗೊಂಡ ಶಾಲೆ ಈಗಿರುವ ಕಟ್ಟಡದಲ್ಲಿರುವುದು ಉದ್ದೇಶ ಪೂರ್ವಕವಾಗಿದೆ. ಈ ಜಾಗದಲ್ಲಿಯೇ ವಿವೇಕ ಸ್ಮಾರಕ ನಿರ್ಮಿಸಲು ಹಟ ಹಿಡಿದು ಕುಳಿತಿರುವ ರಾಮಕೃಷ್ಣ ಆಶ್ರಮದ ಕಠಿಣ ನಿಲುವು ಮಾತ್ರ ಆಕಸ್ಮಿಕ ಎಂದು ಅವರು ಹೇಳಿದ್ದಾರೆ.
ವಿವೇಕಾನಂದರು ತಮ್ಮಹೋರಾಟದ ಬಾಳಿನ ಉದ್ದಕ್ಕೂ ವಿರೋಧಿಸಿದ ಪುರೋಹಿತರ ದರ್ಪವೇ ಆಶ್ರಮದ ಕಡೆಯಿಂದಲೂ ಮುಂದುವರಿದಿರುವುದು ಮಾತ್ರ ದುರಂತ ಎಂದು ಅವರು ತಿಳಿಸಿದ್ದಾರೆ.
ರಾಮಕೃಷ್ಣ ಆಶ್ರಮವು ಸ್ವಾಮಿ ವಿವೇಕಾನಂದರ ನವ ಭಾರತ ನಿರ್ಮಾಣ ಮತ್ತು ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಅರಿವುಗಳ ಶಿಕ್ಷಣಗಳಿಂದ ದೂರ ನಡೆದಿದೆ. ಪುರೋಹಿತಶಾಹಿಗಳು ಸ್ಮಾರಕ, ಆಶ್ರಮಗಳ ಹೆಸರಿನಲ್ಲಿ ಭಾರತದ ಶೂದ್ರರನ್ನು ವಂಚಿಸಲು ವಿವೇಕಾನಂದ, ರಾಮಕೃಷ್ಣ ಅವರ ಹೆಸರಲ್ಲಿ ಹೊಸ ವೇಷಗಳಲ್ಲಿ ಹಾಜರಾಗಲು ಸಿದ್ದವಾಗಿರುತ್ತಾರೆ. ಇಂತಹ ತಂತ್ರವೇ ವಿವೇಕ ಸ್ಮಾರಕ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.