ಮೈಸೂರು: ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ 50ಸಾವಿರ ಲಡ್ಡು ಪ್ರಸಾದ ನೀಡಿದ್ದಾರೆ.
ಆಷಾಢ ಅಂಗವಾಗಿ ವೈಯಕ್ತಿಕವಾಗಿ ಲಡ್ಡುಗಳನ್ನು ಮಾಡಿಸಿಕೊಟ್ಟಿದ್ದರು. ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ಅವುಗಳನ್ನು ವಿತರಿಸಲಾಗಿತ್ತು. ಸಚಿವರು ಬೆಟ್ಟಕ್ಕೆ ಭಾನುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಣೆಗೆ ಚಾಲನೆ ನೀಡಿದರು. ದೇವರ ದರ್ಶನ ಮಾಡಿ ಮರಳುವವರಿಗೆ ದೇವಾಲಯದಲ್ಲಿ ಪ್ರಸಾದ ವಿತರಿಸಲಾಯಿತು.
‘ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಹಾಗೂ ಅಮ್ಮನವರ ವರ್ಧಂತಿ ಕಾರ್ಯಕ್ರಮ ಯಶಸ್ವಿವಾಗಿ ನಡೆದಿದೆ. ಇದಕ್ಕಾಗಿ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆಷಾಢ ಶುಕ್ರವಾರಗಳಂದು ಲಕ್ಷಾಂತರ ಭಕ್ತರು ಬಂದಿದ್ದರು. ಈ ವೇಳೆ ಯಾರಿಗಾದರೂ ಏನಾದರೂ ಅಡಚಣೆ ಉಂಟಾಗಿದ್ದಲ್ಲಿ ಕ್ಷಮೆ ಯಾಚಿಸುತ್ತೇನೆ. ಈ ಬಾರಿ ವಾಹನಗಳ ಪಾಸ್ನಿಂದ ಗೊಂದಲವಾಯಿತು. ಆದ್ದರಿಂದ ರದ್ದುಪಡಿಸಿದೆವು. ಮುಂದಿನ ದಸರಾ ವೇಳೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥಿತವಾಗಿ ಜಿಲ್ಲಾಡಳಿತ ಕ್ರಮ ವಹಿಸಲಿದೆ’ ಎಂದು ಸಚಿವರು ತಿಳಿಸಿದರು.
ಶಾಸಕ ಜಿ.ಟಿ.ದೇವೇಗೌಡ, ಮುಖಂಡರಾದ ಎಚ್.ವಿ.ರಾಜೀವ್, ಟಿ.ಎಸ್.ಶ್ರೀವತ್ಸ, ಮಂಗಳಾ ಸೋಮಶೇಖರ್, ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ಪಾಲ್ಗೊಂಡಿದ್ದರು.