ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳನ್ನು ಸರ್ಕಾರ ವಹಿಸಿಕೊಳ್ಳಲಿ: ವಿವಿಧ ಸಂಘಟನೆಗಳ ಕಾರ್ಯಕರ್ತರು, ಚಿಂತಕರ ಆಗ್ರಹ

Last Updated 2 ಸೆಪ್ಟೆಂಬರ್ 2022, 8:56 IST
ಅಕ್ಷರ ಗಾತ್ರ

ಮೈಸೂರು: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದ ಬಂಧಿತ ಆರೋಪಿ ಶಿವಮೂರ್ತಿ ಮುರುಘಾ ಶರಣರಿಗೆ ಕಠಿಣ ಶಿಕ್ಷೆ ಆಗುವಂತೆ ನಿಷ್ಪಕ್ಷ್ಯಪಾತ ತನಿಖೆ ನಡೆಸಬೇಕು. ಮಠಗಳನ್ನು ಸರ್ಕಾರವು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಬಸವೇಶ್ವರ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಂಗಕರ್ಮಿ ಎಚ್‌.ಜನಾರ್ಧನ್‌ ಮಾತನಾಡಿ, ‘ಮಕ್ಕಳಿಗೆ ಶಿಕ್ಷಣ ಹಾಗೂ ಆಶ್ರಯ ನೀಡಬೇಕಾದ ಮಠಗಳು ಅನೈತಿಕ ಹಾದಿಯತ್ತ ಸಾಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಅಕ್ಷರ ದಾಸೋಹ ನೀಡುವ ನೆಪದಲ್ಲಿ ದೌರ್ಜನ್ಯ ನಡೆಸುತ್ತಿರುವ ಮಠಗಳನ್ನು ಸರ್ಕಾರವು ವಶಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ಪ್ರಕರಣದ ಎಲ್ಲ ಆರೋ‍ಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ನ್ಯಾಯಾಂಗ ತನಿಖೆ ಆಗಿ ತ್ವರಿತವಾಗಿ ಶಿಕ್ಷೆಯಾಗಬೇಕು’ ಎಂದರು.

ಚಿಂತಕ ಪ.ಮಲ್ಲೇಶ್‌ ಮಾತನಾಡಿ, ‘ಮುರುಘಾ ಶರಣರ ವಿರುದ್ಧದ ಪ್ರಕರಣದಲ್ಲಿ ವಿರೋಧ ಪಕ್ಷಗಳು ಮೌನವಹಿಸಿರುವುದೇಕೆ? ಮತ ಬ್ಯಾಂಕ್‌ ರಾಜಕೀಯ ಕಾರಣಕ್ಕಾಗಿ ಪ್ರಭಾವಿಗಳ ಬಗ್ಗೆ ಮಾತನಾಡುತ್ತಿಲ್ಲ? ತನಿಖೆ ವಿಳಂಬವಾಗಿ ಆರಂಭವಾಗಿರುವುದು ಅಕ್ಷಮ್ಯ’ ಎಂದರು.

ಹೋರಾಟಗಾರ್ತಿರತಿರಾವ್, ‘ಬಾಲಕಿಯ ಹಾಸ್ಟೆಲ್‌ಗಳಿಗೆ ಭದ್ರತೆ ಇಲ್ಲದಾಗಿದೆ. ಸಾವಿರಾರು ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಪೋಕ್ಸೊ ಪ್ರಕರಣ ದಾಖಲಾದ ವಾರದ ಬಳಿಕ ಆರೋಪಿ ಬಂಧನವಾಗಿರುವುದನ್ನು ಗಮನಿಸಿದರೆ ಸಂತ್ರಸ್ತ ಬಾಲಕಿಯರಿಗೆ ನ್ಯಾಯ ಸಿಗುವುದರ ಬಗ್ಗೆ ಅನುಮಾನ ವ್ಯಕ್ತವಾಗುತ್ತದೆ’ ಎಂಬ ಕಳವಳ ವ್ಯಕ್ತಪಡಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜಗದೀಶ್‌ ಸೂರ್ಯ,ಹೊರೆಯಾಲ ದೊರೆಸ್ವಾಮಿ, ಜಿ.‍ಪಿ.ಬಸವರಾಜು, ರೈತಸಂಘದ ಹೊಸಕೋಟೆ ಬಸವರಾಜು, ಸ್ವರಾಜ್‌ ಇಂಡಿಯಾದ ಉಗ್ರ ನಗರಸಿಂಹೇಗೌಡ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಕೆ.ಬಸವರಾಜ್‌, ಲೇಖಕ ನಾ.ದಿವಾಕರ, ಅಖಿಲ ಭಾರತ ಮಹಿಳಾ ಒಕ್ಕೂಟದ ಮುಖಂಡರು ಸೀಮಾ, ಸಂಧ್ಯಾ, ಪಂಡಿತಾರಾಧ್ಯ, ದಸಂಸದ ಶಂಭುಲಿಂಗಸ್ವಾಮಿ, ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ವಿಜಯ್‌ಕುಮಾರ್‌, ಸಂಗಯ್ಯ, ಮರಿದೇವಯ್ಯ ಇದ್ದರು.

‘ಸಿಬಿಐ’ಗೆ ಪ್ರಕರಣ ವಹಿಸಲು ಒತ್ತಾಯ:ಮುರುಘಾ ಶರಣರ ವಿರುದ್ಧದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ‘ಮೈಸೂರು ಕನ್ನಡ ವೇದಿಕೆ’ ಆಗ್ರಹಿಸಿದೆ.

ಜಿಲ್ಲಾಧಿಕಾರಿ ಕಚೇರಿ ಸಮೀಪ ಶುಕ್ರವಾರ ಜಮಾಯಿಸಿದ ವೇದಿಕೆಯ ಸದಸ್ಯರು ಗೃಹ ಇಲಾಖೆ, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆ ಅಧ್ಯಕ್ಷ ಎಸ್‌.ಬಾಲಕೃಷ್ಣ ಮಾತನಾಡಿ, ‘ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಚುನಾವಣೆ ಕಾರಣಕ್ಕೆ ನಿರ್ದಾಕ್ಷಿಣ್ಯ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ತನಿಖೆಯನ್ನು ಸಿಬಿಐಗೆ ವಹಿಸಿದರೆ ಸಂತ್ರಸ್ತ ಬಾಲಕಿಯರಿಗೆ ನ್ಯಾಯ ಸಿಗಲಿದೆ’ ಎಂದು ಹೇಳಿದರು.

ಮುಖಂಡರಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಮಾಲಿನಿ, ಮಹದೇವಸ್ವಾಮಿ, ಅರವಿಂದ್, ರಾಧಾಕೃಷ್ಣ, ಗೋವಿಂದರಾಜ್‌, ಸುನಿಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT