ಹುಣಸೂರು: ದಸರಾ ಸಲುವಾಗಿ ನಾಗರಹೊಳೆ ಅರಣ್ಯದಿಂದ ಆನೆ ಪಡೆಯನ್ನು ಸಾಂಪ್ರದಾಯಕವಾಗಿ ಬರ ಮಾಡಿಕೊಳ್ಳುವ ಸಂಪ್ರದಾಯಕ್ಕೆ ಸಾಕ್ಷಿಯಾಗಿದ್ದ ಮೂರ್ಕಲ್ ಗಣಪನ ಗುಡಿ ಈಗ ಅನಾಥವಾಗಿದೆ.
ದಸರಾ ಸಮೀಪಿಸುತ್ತಿದ್ದಂತೆ ಅರಮನೆ ನಿಯೋಜಿಸಿದ ಸಿಬ್ಬಂದಿ ಮಾವುತ ಮತ್ತು ಕಾವಾಡಿಗಳಿಗೆ ಗೌರವಪೂರಕವಾಗಿ ತಾಂಬೂಲ ನೀಡಿ ಆಹ್ವಾನಿಸುವ ಸಂಪ್ರದಾಯವಿತ್ತು. ತಾಂಬೂಲ ಪಡೆದ ಗಿರಿಜನರು ಅರಮನೆಗೆ ಹೃದಯ ತುಂಬಿ ಸಮ್ಮತಿಸಿ ದಸರಾ ಮೇಳದಲ್ಲಿ ಪಾಲ್ಗೊಳುತ್ತಿದ್ದರು.
ಅರಮನೆಗೆ ಪ್ರಯಾಣ ಬೆಳೆಸುವ ಮುನ್ನ ಗಿರಿಜನರು ಕುಟುಂಬ ಸಮೇತರಾಗಿ ಗಜಪಡೆ ತಂಡದೊಂದಿಗೆ ನಾಗರಹೊಳೆ ಅರಣ್ಯದ ಮೂರ್ಕಲ್ ವಲಯದಲ್ಲಿರುವ ಶತಮಾನದ ಹಳೆಯ ಗಣಪತಿ ದೇವಸ್ಥಾನಕ್ಕೆ ಪೂಜೆ ಮಾಡುವ ಸಂಪ್ರದಾಯವಿತ್ತು.
ಬದಲಾದ ಪರಿಸ್ಥಿತಿಯಲ್ಲಿ. ದಸರಾ ನಾಡ ಹಬ್ಬವಾಯಿತು. ಅರಮನೆ ಸಂಪ್ರದಾಯದಂತೆ ಆನೆ ಪಡೆಯನ್ನು ಆಹ್ವಾನಿಸುವ ಸಂಪ್ರದಾಯ ಬದಲಾವಣೆಯೊಂದಿಗೆ ಸರ್ಕಾರದ ಉಸ್ತುವಾರಿ ಯಲ್ಲಿ ಗಜಪಯಣ ಆರಂಭಕ್ಕೆ ನಾಂದಿ ಹಾಡಿತು. ಮೂರ್ಕಲ್ ಅರಣ್ಯದ ಗಣಪನ ದೇವಸ್ಥಾನದಲ್ಲಿ ಗಿರಿಜನರು ಕುಟುಂಬ ಸಮೇತರಾಗಿ ಸಲ್ಲಿಸುತ್ತಿದ್ದ ಸಾಂಪ್ರದಾಯಿಕ ಪೂಜೆಯೂ ಅಂತ್ಯಗೊಂಡಿತು.
ನಾಗರಹೊಳೆ ಹುಲಿ ಸಂರಕ್ಷಣೆ ಪ್ರದೇಶವಾದ ಹಿನ್ನೆಲೆಯಲ್ಲಿ ಕಾಡಿನೊಳಗೆ ಅನ್ಯ ಚಟುವಟಿಕೆಗಳಿಗೆ ಅವಕಾಶ ಇಲ್ಲದ್ದರಿಂದ ಗಜಪಯಣದ ಆರಂಭ ಬಿಂದು ಮೂರ್ಕಲ್ ನಿಂದ ವೀರನಹೊಸಹಳ್ಳಿ ವಲಯಕ್ಕೆ ವರ್ಗಾವಣೆಗೊಂಡಿತು. ಕಾಲ ಕ್ರಮೇಣ ಇಲಾಖೆ ನಿಯಮಗಳು ಗಟ್ಟಿಯಾಗುತ್ತಿದ್ದಂತೆ ವೀರನಹೊಸಹಳ್ಳಿಯಲ್ಲಿ ನಡೆಯುತ್ತಿದ್ದ ಗಜಪಯಣ ಈಗ ನಾಗರಹೊಳೆ ಅರಣ್ಯದಂಚಿನ ಮುಖ್ಯದ್ವಾರದ ಹೊರಭಾಗ ದಲ್ಲಿ ಆಚರಿಸಲು ಸೀಮಿತಗೊಂಡಿದೆ. ಮೂರ್ಕಲ್ ಗಣಪನಗುಡಿ ಅನಾಥವಾಗಿ ಪಾಳುಬಿದ್ದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.