ಮೈಸೂರು: ಪಡಿತರ ವಿತರಣೆ ಸಂಬಂಧ ಲೋಪದೋಷ ಎಸಗಿರುವ 7 ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಶಿವಣ್ಣ ನೋಟಿಸ್ ನೀಡಿದ್ದಾರೆ.
ಇವರ ನೇತೃತ್ವದ ಅಧಿಕಾರಿಗಳ ತಂಡವು ಗೌಸಿಯಾನಗರ, ಕ್ಯಾತಮಾರನಹಳ್ಳಿ, ಜೆ.ಪಿ.ನಗರ, ಉದಯಗಿರಿ, ಹೂಟಗಳ್ಳಿ ಮುಂತಾದ ಪ್ರದೇಶಗಳಿಗೆ ಅನಿರೀಕ್ಷಿತ ದಾಳಿ ನಡೆಸಿದಾಗ ಅಕ್ರಮಗಳು ಪತ್ತೆಯಾದವು.
ದಾಳಿ ಮಾಡಿದ ವೇಳೆ 697 ಕ್ವಿಂಟಲ್ ಅಕ್ಕಿ ಮತ್ತು 8.30 ಕ್ವಿಂಟಲ್ ತೊಗರಿಬೇಳೆಯು ಲೆಕ್ಕಪತ್ರ ದಾಸ್ತಾನಿಗೂ, ಭೌತಿಕ ದಾಸ್ತಾನಿಗೂ ವ್ಯತ್ಯಾಸ ಕಂಡುಬಂದಿದೆ. ಎಂಡಿಸಿಸಿಡಬ್ಲ್ಯೂ ಸ್ಟೋರ್ಸ್ನ ಸಗಟು ನಾಮಿನಿಯ ಮಳಿಗೆ ವ್ಯವಸ್ಥಾಪಕರನ್ನು ಅಮಾನತ್ತಿನಲ್ಲಿರಿಸಲಾಗಿದೆ ಮತ್ತು ಇವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಸಮಯದಲ್ಲಿ ಗೌಸಿಯಾನಗರ ವ್ಯಾಪ್ತಿಯ ಕಾರ್ಡುದಾರರಿಂದ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನಿರಿಸಿದ್ದ ಸುಮಾರು 3.80 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಪರಿಶೀಲನಾ ಸಮಯದಲ್ಲಿ ತೂಕದಲ್ಲಿ ಕಡಿಮೆ ಆಹಾರಧಾನ್ಯ ವಿತರಣೆ ಮಾಡುತ್ತಿದ್ದ ಮೈಸೂರು ತಾಲ್ಲೂಕಿನ ಶ್ರೀಕಂಠ ನ್ಯಾಯಬೆಲೆ ಅಂಗಡಿಯನ್ನು ಅಮಾನತ್ತುಪಡಿಸಲಾಗಿದೆ. ಮೈಸೂರು ನಗರದ ಶಾರದಾ ನ್ಯಾಯಬೆಲೆ ಅಂಗಡಿಯನ್ನು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಮತ್ತು ಜಿಲ್ಲೆಯ ಒಟ್ಟು 7 ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಾರಣ ಕೇಳುವ ನೋಟಿಸ್ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.