ಮೈಸೂರು: ವಿಜಯೋತ್ಸವ ಆಚರಣೆಗೆ ಪೊಲೀಸರು ಅಡ್ಡಿಪಡಿಸಿದರು ಎಂದು ಆಮ್ ಆದ್ಮಿ ಪಕ್ಷ (ಎಎಪಿ)ದ ಜಿಲ್ಲಾ ಘಟಕದ ಅಧ್ಯಕ್ಷೆ ಮಾಲವಿಕಾ ಗುಬ್ಬಿವಾಣಿ ಆರೋಪಿಸಿದರು.
ಬಿಜೆಪಿ ಕಾರ್ಯಕರ್ತರಿಗೆ ವಿಜಯೋತ್ಸವ ಆಚರಿಸಲು ಅನುಮತಿ ನೀಡಿದ ಪೊಲೀಸರು ನಮ್ಮ ಕಾರ್ಯಕರ್ತರ ಬೈಕ್ ರ್ಯಾಲಿಗೆ ಅನುಮತಿ ನಿರಾಕರಿಸಿದರು. ನಂತರ ಪಾದಯಾತ್ರೆ ನಡೆಸಲು ಮುಂದಾದಾಗ ಹೆಬ್ಬಾಳದ ಸೂರ್ಯಬೇಕರಿ ಸಮೀಪ ತಡೆದರು ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಎಎಪಿಯ ವಿಜಯ ರಾಜಕೀಯ ಪಕ್ಷಗಳಲ್ಲಿ ಗಾಬರಿ ಹುಟ್ಟಿಸಿದೆ. ಇದರಿಂದಾಗಿಯೆ ತಮ್ಮ ಪ್ರಭಾವ ಬಳಸಿ ನಮ್ಮ ರ್ಯಾಲಿಗೆ ತಡೆಯೊಡ್ಡಿವೆ ಎಂದು ಕಿಡಿಕಾರಿದರು.
ನಾವು ಕೇವಲ ಒಂದು ರಾಜಕೀಯ ಪಕ್ಷವನ್ನು ಬದಲಿಸಲು ಬಂದಿಲ್ಲ. ಕೊಳಕು ರಾಜಕೀಯ ಬದಲಾಯಿಸಲು ಬಂದಿದ್ದೇವೆ. ನಮಗೆ ಸಾರ್ವಜನಿಕ ಶಿಕ್ಷಣ, ಆರೋಗ್ಯ, ಸಾರಿಗೆ, ನೀರು, ಮಹಿಳೆಯರ ಸುರಕ್ಷೆ ಮುಖ್ಯವಾಗಿದೆ ಎಂದು ಪಕ್ಷದ ಮಾಧ್ಯಮ ಸಂಯೋಜಕ ಜಿ.ಆರ್.ವಿದ್ಯಾರಣ್ಯ ತಿಳಿಸಿದರು.
ಪಕ್ಷದ ಸಂಘಟಣಾ ಕಾರ್ಯದರ್ಶಿ ರೇಣುಕಾಪ್ರಸಾದ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಇಸ್ಮಾಯಿಲ್ ಇದ್ದರು.