ಮೈಸೂರು: ತೋಟಗಾರಿಕಾ ಇಲಾಖೆಯ ವತಿಯಿಂದ ಇಲ್ಲಿನ ಕುಪ್ಪಣ್ಣ ಉದ್ಯಾನದಲ್ಲಿ ಭಾನುವಾರ ದಸರಾ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.
ಇಲ್ಲಿನ ಪ್ರಧಾನ ಆಕರ್ಷಣೆಯಾದ ಗಾಜಿನಮನೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಗುಲಾಬಿಗಳಿಂದ ನಿರ್ಮಿಸಿರುವ ಜಯಚಾಮರಾಜ ಒಡೆಯರ್ ಅವರ ಪ್ರತಿಕೃತಿಯನ್ನು ಕಂಡು ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದರು. 27 ಅಡಿ ಎತ್ತರ, 50 ಅಡಿ ಅಗಲದ ಈ ಪ್ರತಿಮೆಯ ಗೋಪುರ 12 ಅಡಿಯಷ್ಟು ಎತ್ತರ ಇದೆ. ಇದರ ಸೌಂದರ್ಯವನ್ನು ಅವರು ಹೊಗಳಿದರು.
ಸಿಂಹಾಸನ, ಆನೆಯ ಹೂವಿನ ಪ್ರತಿಕೃತಿಗಳು, ಚಂದ್ರಾಯನ ಮಾದರಿಗಳು ಆಕರ್ಷಣೀಯವಾಗಿವೆ. ಡೊನಾಲ್ಡ್ ಡಕ್ ಪ್ರತಿಕೃತಿಗಳು ಚಿಣ್ಣರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.
ಇದಲ್ಲದೇ ಸಾವಿರಾರು ಹೂಗಳು ಪ್ರವಾಸಿಗರನ್ನು ಮನ ಸೆಳೆಯುತ್ತಿವೆ. 60ಕ್ಕೂ ಹೆಚ್ಚು ಮಳಿಗೆಗಳಲ್ಲಿ ತಿಂಡಿ ತಿನಿಸುಗಳ ಮಾರಾಟ ನಡೆದಿದೆ.
ವರ್ಟಿಕಲ್ ಉದ್ಯಾನ, ಇಕೆಬಾನ ಸೇರಿದಂತೆ ಹಲವು ನೂತನ ಸಸ್ಯೋದ್ಯಾನದ ಪರಿಕಲ್ಪನೆಗಳನ್ನು ಪರಿಚಯಿಸಲಾಗಿದೆ. ಇವೆಲ್ಲವೂ ಫಲಪುಷ್ಪ ಪ್ರದರ್ಶನದ ಪ್ರಧಾನ ಆಕರ್ಷಣೆಗಳಾಗಿವೆ.
ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ, ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಜ್ಯೋತಿ, ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕರಾದ ರುದ್ರೇಶ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಹಬೀಬಾ ನಿಶಾತ್ ಹಾಗೂ ಇತರ ಅಧಿಕಾರಿಗಳು ಇದ್ದರು.