ಮೈಸೂರು: ಕೊರೊನಾ ವೈರಸ್ ಹರಡುವಿಕೆಗೆ ತಡೆಯಲು ಸರ್ಕಾರ ಘೋಷಿಸಿರುವ ‘ಲಾಕ್ಡೌನ್’ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯು ಸಹಕಾರ ನೀಡಲಿದೆ. ಆದರೆ, ರೈತರ ನಷ್ಟವನ್ನು ತುಂಬಿಕೊಡಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಇದೊಂದು ಸಂದಿಗ್ದ ಪರಿಸ್ಥಿತಿ. ಇದಕ್ಕೆ ಸಹಕಾರ ನೀಡಲು ಬದ್ಧ. ಆದರೆ, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ನಿತ್ಯ ಉಂಟಾಗುತ್ತಿದೆ. ಅವರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಸರ್ಕಾರವೇ ರೈತರ ಬೆಳೆಯನ್ನು ಖರೀದಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಒಂದು ವೇಳೆ ಸರ್ಕಾರವು ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಹೋದರೆ ‘ಲಾಕ್ಡೌನ್’ಗೆ ಸಹಕಾರ ನೀಡುತ್ತಲೇ, ಕೊರೊನಾ ವೈರಸ್ ಹರಡುವಿಕೆ ತಡೆಯುವಂತಹ ವಿನೂತನ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.