ಮೈಸೂರು: ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಜನ್ಮದಿನದ ಪ್ರಯುಕ್ತ ವಿದ್ಯಾರಣ್ಯಾಪುರಂನ ರಾಮಲಿಂಗೇಶ್ವರ ಉದ್ಯಾನದಲ್ಲಿ ‘ನಮೋ ದಿವಸ್ ನಮಸ್ಕಾರ’ ಶೀರ್ಷಿಕೆಯಡಿ ಸೆ. 17ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಇಲ್ಲಿ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿ ಲಭ್ಯವಿದ್ದು, ಅರ್ಹರು ಫಲಾನುಭವಿಯಾಗುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ಮಾಹಿತಿ ನೀಡುವ ಆ್ಯಪ್ನ್ನು ಆನ್ಲೈನ್ನಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ ಬಿಡುಗಡೆ ಮಾಡುವರು ಎಂದು ಶಾಸಕ ಎಸ್.ಎ.ರಾಮದಾಸ್ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಧಾನಿಯವರು ನೀಡಿದ ಆಯ್ದ 70 ಯೋಜನೆಗಳ ಫ್ಲೆಕ್ಸ್ಗಳನ್ನು ಪ್ರದರ್ಶನಕ್ಕಿಡಲಾಗುವುದು. ಇವುಗಳನ್ನು ವೀಕ್ಷಿಸಿ, ಯೋಜನೆಗಳ ಅನುಷ್ಠಾನ ಸಂಬಂಧ 2 ಪುಟಗಳಷ್ಟು ಸಲಹೆ ನೀಡಲು ಅವಕಾಶ ಇದೆ. ಇದರಲ್ಲಿ ಉತ್ತಮವಾದ ಸಲಹೆಗಳಿಗೆ ಬಹುಮಾನಗಳನ್ನು ನೀಡಲಾಗುವುದು ಎಂದು ಹೇಳಿದರು.
ನರೇಂದ್ರ ಮೋದಿ ಅವರ ಬಾಲ್ಯದಿಂದ ಹಿಡಿದು ಇಲ್ಲಿಯವರೆಗಿನ 70 ಭಾವಚಿತ್ರಗಳ ಪ್ರದರ್ಶನದ ವ್ಯವಸ್ಥೆಯು ಇರಲಿದೆ. 18 ವರ್ಷದೊಳಗಿನ ಮಕ್ಕಳು ಇವುಗಳನ್ನು ವೀಕ್ಷಿಸಿ 5 ರಸಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. ಸರಿಯಾದ ಉತ್ತರ ನೀಡಿದ ಮಕ್ಕಳಿಗೆ ‘ನಮೋ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಫ್ಲೆಕ್ಸ್ ವಿಭಾಗ ಹಾಗೂ ಮಕ್ಕಳ ರಸಪ್ರಶ್ನೆ ವಿಭಾಗದಲ್ಲಿ ಪ್ರಥಮ ಬಹುಮಾನ ₹ 5 ಸಾವಿರ, ದ್ವಿತೀಯ ಬಹುಮಾನ ₹ 4 ಸಾವಿರ, ತೃತೀಯ ಬಹುಮಾನ ₹ 3 ಸಾವಿರ, 4ನೇ ಬಹುಮಾನ ₹ 2 ಸಾವಿರ, 5ನೇ ಬಹುಮಾನ ₹ 1 ಸಾವಿರ ಹಾಗೂ 5 ಸಮಾಧಾನಕರ ಬಹುಮಾನಗಳು ಇರಲಿವೆ ಎಂದರು.
ವೃತ್ತಿ ಜೀವನವನ್ನು ಪ್ರೀತಿಸಿ, ಗೌರವಿಸಿ ಆತ್ಮಗೌರವದಿಂದ ಬದುಕುತ್ತಿರುವ 70 ಜನ ವೃತ್ತಿವಂತರನ್ನು ಸನ್ಮಾನಿಸಲಾಗುವುದು, ಮೋದಿ ಅವರ 6 ವರ್ಷಗಳ ಸಾಧನೆಯನ್ನು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಆನ್ಲೈನ್ನಲ್ಲಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಮೋದಿ ಜನಿಸಿದ ಸಮಯವಾದ ಬೆಳಿಗ್ಗೆ 10.15ಕ್ಕೆ ಅಭಿಲಾಷ್ ಎಂಬ ಕಾರ್ಯಕರ್ತರೊಬ್ಬರು ಮೋದಿ ಅವರ ಭಾವಚಿತ್ರವನ್ನು ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ನಿರಂತರವಾಗಿ ಹಾಡುಗಾರಿಕೆ, ಶಾಸ್ತ್ರೀಯ ಸಂಗೀತಾ, ದೇಶಭಕ್ತಗೀತೆಗಳ ಕಾರ್ಯಕ್ರಮ ಇರಲಿದೆ ಎಂದು ತಿಳಿಸಿದರು.
ಪಕ್ಷದ ಮುಖಂಡರಾದ ವಡಿವೇಲು, ಬಾಲಕೃಷ್ಣ, ನಾಗೇಶ್ಕುಮಾರ್ ಇದ್ದರು.