ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಸೇತುವೆಯ ತೂಬುಗಳ ತುಂಬ ನೀರು ಹರಿಯುತ್ತಿತ್ತು. ಪ್ರಾಣಾಯಾಮದಿಂದ ಉಸಿರುಗಟ್ಟಿ ಹಿಡಿದು ಸೇತುವೆಯಡಿ ನೀರಿನಲ್ಲಿ ಮುಳುಗಿಯೇ ಈಜಬಹುದು ಎಂದು ಭಾವಿಸಿದ್ದೆ. ಆದರೆ, ಅರ್ಧಕ್ಕೆ ಬರುವಷ್ಟರಲ್ಲಿ ಉಸಿರುಗಟ್ಟಲು ಆಗಲಿಲ್ಲ. ಆಗ ಮೇಲೆ ತಲೆ ಹಾಕಿದೆ. ಸೇತುವೆ ಕೆಳಭಾಗದಲ್ಲಿ ಅಲ್ಲೊಂದು ಸಣ್ಣ ಜಾಗ ಕಂಡಿತು. ಕಂಬಿ ಹಿಡಿದು ಹತ್ತಿ ಆ ಸಣ್ಣ ಜಾಗದಲ್ಲೇ ಇಡೀ ರಾತ್ರಿ ಕಳೆದೆ. ಚಳಿ, ಜ್ವರ ಬಂದಿತು. ನಂತರ, ನೀರು ಕಡಿಮೆಯಾಗಿದ್ದನ್ನು ಕಂಡು ನೀರಿನಲ್ಲಿ ಧುಮುಕಿ ಸೇತುವೆಯ ಮತ್ತೊಂದು ಬದಿಗೆ ಬಂದು ಜನರನ್ನು ಕೂಗಿದೆ. ಆಗ ಜನರು ರಕ್ಷಿಸಿದರು’ ಎಂದು ಅವರು ತಿಳಿಸಿದ್ದಾರೆ.