ಮೈಸೂರು: ನಕ್ಸಲರು ಈಚೆಗೆ ಮಹಾರಾಷ್ಟ್ರದಲ್ಲಿ ನಡೆಸಿದ ಮಾರಣಹೋಮ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಮಸ್ವಾಮಿ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ನಕ್ಸಲರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮಹಾರಾಷ್ಟ್ರದ ಗುಡಚಿರೋಲಿಯಲ್ಲಿ ನಕ್ಸಲರು ವಿಶೇಷ ಕಮಾಂಡೊ ಪಡೆಯ 16 ಮಂದಿ ಯೋಧರನ್ನು ಕೊಂದಿದ್ದಾರೆ. ಇದೊಂದು ಮನುಕುಲದ ಮೇಲೆ ನಡೆದ ಹೇಯ ಕೃತ್ಯ. ಅಲ್ಲಿನ ಸರ್ಕಾರ ಕೂಡಲೇ ತನಿಖೆ ನಡೆಸಿ ನಕ್ಸಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹುತಾತ್ಮರಾದ ಯೋಧರಿಗೆ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.
ಸಂಘಟನೆಯ ನಗರ ಘಟಕದ ಕಾರ್ಯದರ್ಶಿ ಗೌತಮ್, ವಿಭಾಗದ ಸಂಚಾಲಕ ರಾಕೇಶ್, ಮುಖಂಡರಾದ ಶರತ್, ಶ್ರೀರಾಮ್, ರಾಧಾಕೃಷ್ಣ, ಚಿರಂತ್, ಶಿವಶಂಕರ್, ಆನಂದ್ ಹಾಗೂ ಮತ್ತಿತ್ತರು ಇದ್ದರು.