ವರುಣಾ: ಈ ಬಾರಿ ಅತಿವೃಷ್ಟಿಯಿಂದ ಭತ್ತದ ಫಸಲು ಅರ್ಧದಷ್ಟು ಕಡಿಮೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸುತ್ತೂರು, ಕುಪ್ಪೇಗಾಲ, ಹೊಸ ಕೋಟೆ, ತುಮ್ಮನೇರಳೆ, ಎಡಕೊಳ, ತಾಯೂರು, ನಗರ್ಲೆ, ಕುಪ್ಪರವಳ್ಳಿ ಭಾಗದ ಕಬಿನಿ ಎಡ ಹಾಗೂ ಬಲದಂಡೆ ಕಾಲುವೆ ಮೂಲಕ ಬೆಳೆದ ಭತ್ತದ ಉತ್ಪಾದನೆ ಕಡಿಮೆಯಾಗಿದೆ. ರೈತರು ನಿರೀಕ್ಷಿಸಿದಷ್ಟು ಫಸಲು ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ.
ಭತ್ತವು ಕಾಳು ಕಟ್ಟುವ ಸಂದರ್ಭ ದಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ಭತ್ತ ಜೊಳ್ಳಾಗಿ ಫಸಲು ಕಡಿಮೆಯಾಗಿದೆ. ಅಲ್ಲದೆ, ಭತ್ತದ ಪೈರು ನೆಲಕಚ್ಚಿ ಸಾಕಷ್ಟು ಹಾನಿ ಸಂಭವಿಸಿದೆ.
ಆಳುಗಳ ಕೊರತೆಯಿಂದ ರೈತರು ಯಂತ್ರಗಳ ಮೊರೆ ಹೋಗಿರುವುದು ಕೂಡ ಖರ್ಚು ಹೆಚ್ಚಾಗಲು ಕಾರಣವಾಗಿದೆ.
‘ಕಳೆದ ವರ್ಷ ನಾಲ್ಕೂವರೆ ಎಕರೆ ಪ್ರದೇಶದಲ್ಲಿ 160 ಮೂಟೆ ಭತ್ತ ಬೆಳೆದಿದ್ದೆ. ಆದರೆ, ಈ ವರ್ಷ 85 ಮೂಟೆ ಮಾತ್ರ ಬಂದಿದೆ’ ಎಂದು ಸುತ್ತೂರು ರೈತ ಲೋಕೇಶ್ ಅಳಲು ತೋಡಿಕೊಂಡರು.
‘ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಭತ್ತದ ಫಸಲು ಕಡಿಮೆಯಾಗಿದೆ. ಒಂದು ಎಕರೆಯಲ್ಲಿ 40 ಮೂಟೆ ಬದಲಿಗೆ 20 ಮೂಟೆ ಭತ್ತ ಸಿಕ್ಕಿದೆ’ ಎಂದು ರೈತ ಶಿವಸ್ವಾಮಿ ತಿಳಿಸಿದರು.
ಭತ್ತ ಖರೀದಿ ಕೇಂದ್ರದಲ್ಲಿ ದರ ಹಾಗೂ ಅಳತೆಯಲ್ಲಿ ಕಡಿತವಾಗುವುದರಿಂದ ಬಿಳಿಗೆರೆ ರೈತ ಕೇಂದ್ರದ ಕಡೆ ರೈತರು ಮುಖ ಮಾಡಿಲ್ಲ. ದಲ್ಲಾಳಿಗಳ ಮೊರೆ ಹೋಗುತ್ತಿದ್ದಾರೆ.
ಕಳೆದ ಬಾರಿ ಜ್ಯೋತಿ ಭತ್ತ ಪ್ರತಿ ಕ್ವಿಂಟಲ್ಗೆ ₹2,700, ಸಣ್ಣ ಭತ್ತ ₹2,000 ಇತ್ತು. ಈ ಬಾರಿ ಕ್ರಮವಾಗಿ ₹2,000 ಹಾಗೂ ₹1,700 ಇದೆ.