ಮೈಸೂರು: ‘ಕರ್ತವ್ಯದ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕು’ಎಂದು ಏರ್ ಕಮಾಂಡರ್ ಪಿ.ಸರವಣನ್ ಕಿವಿಮಾತು ಹೇಳಿದರು.
ನಗರದಲ್ಲಿನ ಜಿಲ್ಲಾ ಪೊಲೀಸ್ ಕಚೇರಿ ಪಕ್ಕದಲ್ಲಿರುವ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನದಲ್ಲಿ ಬುಧವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಹುತಾತ್ಮರಾಗುತ್ತಿರುವ ಪೊಲೀಸರ ಸಂಖ್ಯೆ ಹೆಚ್ಚುತ್ತಿದೆ. ಖಿನ್ನತೆಗೆ ಒಳಗಾಗದೆ ವ್ಯಾಯಾಮ, ಯೋಗಾಸನದ ಮೂಲಕ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು’ ಎಂದರು.
‘ಭಾರತ–ಚೀನಾದ ಗಡಿ ಪ್ರದೇಶದಲ್ಲಿರುವ ಲಡಾಕ್ ಪ್ರದೇಶದ ಅಕ್ಸಾಯ್ ಎಂಬಲ್ಲಿ ಸಿಆರ್ಪಿಎಫ್ ಪಡೆಯ ಡಿಎಸ್ಪಿ ಕರನ್ಸಿಂಗ್ ನೇತೃತ್ವದಲ್ಲಿ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಚೀನಿ ಸೈನಿಕರು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದರೂ ಎದೆಗುಂದದೆ ನಮ್ಮ ಪಡೆ ಹೋರಾಟ ನಡೆಸಿತು. ಈ ಪಡೆಯ ಧೈರ್ಯ, ಸಾಹಸ ಇಡೀ ರಾಷ್ಟ್ರವನ್ನು ಶೋಕದ ಕಡಲಲ್ಲಿ ಮುಳುಗಿಸಿತ್ತು’ ಎಂದು ಹೇಳಿದರು.
ಈ ದಾಳಿಯಲ್ಲಿ ಮೃತರಾದವರಿಗೆ ಗೌರವ ನಮನ ಸಲ್ಲಿಸಿದ ಪಿ.ಸರವಣನ್, ಮೈಸೂರಿನ ಇಬ್ಬರು ಹುತಾತ್ಮರಾದ ಎಎಸ್ಐ ಶ್ರೀನಿವಾಸ ಎಂ., ಸಿಎಚ್ಸಿ-204 ಕೇಶವ ಅವರಿಗೂ ಗೌರವ ವಂದನೆ ಸಲ್ಲಿಸಿದರು.
ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮೈಸೂರು ಕೆ.ಪಿ.ಎ ಹಾಗೂ ಪೊಲೀಸ್ ಅಧೀಕ್ಷಕರು, ಪಿ.ಟಿ.ಎಸ್ ಡಾ.ಧರಣಿದೇವಿ ಮಾಲಗತ್ತಿ, ಉಪಪೊಲೀಸ್ ಆಯುಕ್ತರಾದ ಪ್ರಕಾಶ್ಗೌಡ ಮತ್ತಿತರರಿದ್ದರು.