ಮೈಸೂರು: ಇಲ್ಲಿನ ಬೆಳವಾಡಿ ಸಮೀಪದ ಅಧೀಶ್ವರ ಬಡಾವಣೆಯ ಖಾಲಿ ನಿವೇಶನದಲ್ಲಿ ಇಲವಾಲ ನಿವಾಸಿ ರವೀಶ್ (36) ಎಂಬುವವರನ್ನು ಕುತ್ತಿಗೆ ಸೀಳಿ ಕೊಲೆ ಮಾಡಲಾಗಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನವರಾದ ಇವರು ಹೂಟಗಳ್ಳಿಯಲ್ಲಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಇಲವಾಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕೊಲೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಎಎಸ್ಪಿ ಶಿವಕುಮಾರ್, ಸಬ್ಇನ್ಸ್ಪೆಕ್ಟರ್ ನಿಖಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವ್ಯಕ್ತಿ ಆತ್ಮಹತ್ಯೆ
ಮೈಸೂರು: ಆಲನಹಳ್ಳಿ ಸಮೀಪದ ಪಾಪಣ್ಣ ಬಡಾವಣೆಯಲ್ಲಿ ಪ್ರಕಾಶ್ (39) ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಿ.ನರಸೀಪುರ ತಾಲ್ಲೂಕಿನ ಯರಗನಹಳ್ಳಿಯವರಾದ ಇವರು, ಇಲ್ಲಿ ಸ್ನೇಹಿತರ ಮನೆಗೆ ಕಳೆದ 3 ದಿನಗಳ ಹಿಂದೆ ಬಂದಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಆಲನಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.
ಮನೆ ಕಳ್ಳತನ; ಆರೋಪಿ ಬಂಧನ
ಮೈಸೂರು: ತಾಲ್ಲೂಕಿನ ಕೋಟೆ ಹುಂಡಿ ಗ್ರಾಮದಲ್ಲಿ ಜೂನ್ 1 ರಂದು ನಡೆದಿದ್ದ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಜಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈತನಿಂದ ಕಳ್ಳತನ ಮಾಡಿದ್ದ 30 ಗ್ರಾಂ ಚಿನ್ನ ಹಾಗೂ ₹ 15 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ಸಬ್ಇನ್ಸ್ಪೆಕ್ಟರ್ ಮೋಹನ್ಕುಮಾರ್ ಕಾರ್ಯಾಚರಣೆ ನಡೆಸಿದ್ದರು.