ಮೈಸೂರು: ‘ಇದು ನಮ್ಮ ತಾತನದ್ದೇ ದೇಶ. ತನ್ವೀರ್ ಸೇಠ್ ತಾತ ಕೂಡ ಹಿಂದೂ ಆಗಿದ್ದರು. ಅವರು ಮಕ್ಕಾ, ಮದೀನದಿಂದ ಬಂದವರಲ್ಲ’ ಎಂದು ಸಂಸದ ಪ್ರತಾಪ ಸಿಂಹ ತಿರುಗೇಟು ನೀಡಿದರು.
‘ಹೊರಗೆ ಹೋಗಿ ಎನ್ನಲು ಈ ದೇಶ ಇವರ ತಾತನದ್ದಾ’ ಎಂಬ ತನ್ವೀರ್ ಹೇಳಿಕೆಗೆ ಮೈಸೂರಿನಲ್ಲಿ ಭಾನುವಾರ ಪ್ರತಿಕ್ರಿಯಿಸಿ, ‘ಅವರ ಪೂರ್ವಜರು ಇಲ್ಲೇ ಹುಟ್ಟಿ ಬೆಳೆದು ಮತಾಂತಗೊಂಡವರು. ಆದ ಕಾರಣ ಇಂದು ತನ್ವೀರ್ ಸೇಠ್ ಆಗಿದ್ದಾರೆ. ಅಷ್ಟೇ ವ್ಯತ್ಯಾಸ. ಅವರ ತಾತ ಹಿಂದೂ ಆಗಿದ್ದರು ಎಂಬ ಸತ್ಯವನ್ನು ಅರಿತುಕೊಂಡು ಮಾತನಾಡಲಿ’ ಎಂದರು.
‘ಮುಸ್ಲಿಮರು ಮತ್ತು ಕ್ರೈಸ್ತರನ್ನು ಬೆತ್ಲೆಹೆಮ್, ಜೆರುಸಲೆಂ, ರೋಂ, ಮಕ್ಕಾ ಅಥವಾ ಮದೀನದಿಂದ ಭಾರತಕ್ಕೆ ತಂದು ಹಾಕಿಲ್ಲ. ಇವರ ಪೂರ್ವಜರು ಹಿಂದೂಗಳೇ ಆಗಿದ್ದರು ಎಂಬ ಸಂಗತಿಯನ್ನು ಒಪ್ಪಿಕೊಳ್ಳಲಿ’ ಎಂದು ಹೇಳಿದರು.