ಮೈಸೂರು: ಜಿಂದಾಲ್ ಕಂಪನಿಗೆ ಭೂಮಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ವಿರೋಧಿಸಿ ಬಿಜೆಪಿಯ ಯುವಮೋರ್ಚಾದ ನಗರ ಮತ್ತು ಗ್ರಾಮಾಂತರ ಘಟಕದ ಕಾರ್ಯಕರ್ತರು ಇಲ್ಲಿನ ದೊಡ್ಡಗಡಿಯಾರದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ನೀಡುತ್ತಿರುವುದು ಅಕ್ರಮ. ಇದರಿಂದ ಸರ್ಕಾರಕ್ಕೆ ಅಪಾರ ನಷ್ಟ ಉಂಟಾಗುತ್ತದೆ ಎಂದು ಅವರು ಆರೋಪಿಸಿದರು.
ಈ ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ. ನಾಡಿನ ಜನರ ದಿಕ್ಕು ತಪ್ಪಿಸುತ್ತಿದೆ. ಖಾಸಗಿ ಕಂಪನಿ ಒಂದಕ್ಕೆ ಲಾಭ ಮಾಡಿಕೊಡುವುದು ಇದರ ಹಿಂದಿನ ಹುನ್ನಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲಗೊಂಡಿದೆ. ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣವಿಡಿದಿದೆ. ಸರ್ಕಾರ ಇದೆಯೊ ಇಲ್ಲವೊ ಎಂದು ಅನುಮಾನಪಡುವಂತಾಗಿದೆ ಎಂದು ಅವರು ದೂರಿದರು.
‘ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ದಿಕ್ಕಾರ’ ಎಂಬ ಘೋಷಣೆಗಳನ್ನು ಕಾರ್ಯಕರ್ತರು ಮೊಳಗಿಸಿದರು. ಒಂದು ವೇಳೆ ಜಿಂದಾಲ್ಗೆ ಭೂಮಿ ನೀಡಿದರೆ ಮತ್ತಷ್ಟು ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮುಖಂಡರಾದ ಗೋಕುಲ್ ಗೋವರ್ಧನ್, ಸಂಪತ್, ಸೋಮಶೇಖರ್ ರಾಜು, ಜೈಶಂಕರ್, ನಾರಾಯಣ್, ಮುರುಳಿ, ರಾಜೇಶ್, ಭರತ್ ಹಾಗೂ ದೇವರಾಜ್ ಇದ್ದರು.