ಮೈಸೂರು: ಜಿಲ್ಲಾ ಹಂತದಲ್ಲೇ ಹಂತಹಂತವಾಗಿ ಸ್ಥಳ ನಿಯುಕ್ತಿಗೊಳಸಬೇಕು ಎಂದು ಆಗ್ರಹಿಸಿ ಹೆಚ್ಚುವರಿ ಶಿಕ್ಷಕರು ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ವಿಭಾಗಮಟ್ಟದ ಕೌನ್ಸೆಲಿಂಗ್ನ್ನು ರದ್ದುಪಡಿಸಬೇಕು. ಟಿಜಿಟಿ ಶಿಕ್ಷಕರಿಗೆ ಜಿಲ್ಲಾ ಹಂತದಲ್ಲಿ ಸ್ಥಳ ನಿಯುಕ್ತಿಗೊಳಿಸುವ ರೀತಿಯಲ್ಲಿ ಹೆಚ್ಚುವರಿ ಶಿಕ್ಷಕರಿಗೂ ಆಯಾ ಜಿಲ್ಲೆಗಳಲ್ಲೇ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.
ಇದೇ ಮೊದಲ ಬಾರಿಗೆ ವಿಭಾಗಮಟ್ಟದಲ್ಲಿ 7 ಜಿಲ್ಲೆಗಳ ಹೆಚ್ಚುವರಿ ಶಿಕ್ಷಕರಿಗೆ ಸ್ಥಳ ನಿಯುಕ್ತಿಗೊಳಿಸಲು ಕೌನ್ಸೆಲಿಂಗ್ ನಡೆಯುತ್ತಿದೆ. ಆದರೆ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆ ಮಾಡಿದರೆ ಸಮಸ್ಯೆಯಾಗುತ್ತದೆ ಎಂದು ಅವರು ಅಳಲು ತೋಡಿಕೊಂಡರು.
ಬಹುತೇಕ ಹೆಚ್ಚುವರಿ ಶಿಕ್ಷಕರು ಹಿರಿಯರೇ ಆಗಿದ್ದಾರೆ. ಇವರಿಗೆ ಜಿಲ್ಲೆಯಿಂದ ಜಿಲ್ಲೆಗೆ ಹೊಂದಿಕೊಳ್ಳುವುದು ಕಷ್ಟ. ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತವೆ. ಹೀಗಾಗಿ, ಬೇಡಿಕೆಯನ್ನು ಸಹಾನುಭೂತಿಯಿಂದ ಈಡೇರಿಸಬೇಕು ಎಂದು ಅವರು ಮನವಿ ಮಾಡಿದರು.
ಸರ್ವರ್ ಸಮಸ್ಯೆಯಿಂದ ಕೌನ್ಸೆಲಿಂಗ್ನ್ನು ಮುಂದೂಡುತ್ತಿರುವ ಕುರಿತೂ ಅವರು ಆಕ್ರೋಶ ವ್ಯಕ್ತಪಡಿಸಿದರು.