ಮೈಸೂರು: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಮುಂಭಾಗ ಗ್ರಾಮ ಪಂಚಾಯಿತಿ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ನೌಕರರಿಗೆ ಬಾಕಿ ಉಳಿಸಿಕೊಂಡಿರುವ ವೇತನವನ್ನು ಶೀಘ್ರ ಪಾವತಿ ಮಾಡಬೇಕು, ನೌಕರರನ್ನು ಇಎಫ್ಎಂಎಸ್ಗೆ ಸೇರಿಸಬೇಕು, ಬಿಲ್ ಕಲೆಕ್ಟರ್ ವೃಂದದಿಂದ ಕಾರ್ಯದರ್ಶಿ ಗ್ರೇಡ್–1 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಶೀಘ್ರ ಬಡ್ತಿ ನೀಡಬೇಕು. ಸೇವಾ ಪುಸ್ತಕ ತೆರೆಯಬೇಕು ಎಂದು ಅವರು ಒತ್ತಾಯಿಸಿದರು.
ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ, ನಿವೃತ್ತಿ ಉಪಧನ, ಅನುಕಂಪದ ನೇಮಕಾತಿ ಬೇಕು ಎಂದು ಹೇಳಿದರು.
ಅಧ್ಯಕ್ಷ ಕೆ.ಬಸವರಾಜು, ಖಜಾಂಚಿ ಲೋಕೇಶ್, ಪ್ರಧಾನ ಕಾರ್ಯದರ್ಶಿ ಟಿ.ಎಸ್.ದಿನೇಶ್ ಇದ್ದರು.
ಸಮಾನ ನಾಗರಿಕ ಸಂಹಿತೆ ಜಾರಿಗೆ ಒತ್ತಾಯ
ಮೈಸೂರು: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಅಗ್ರಹಾರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇದರಿಂದ ಮುಕ್ತಿ ಹೊಂದಬೇಕಾದರೆ ಸಮಾನ ನಾಗರಿಕ ಸಂಹಿತೆಯೊಂದೇ ದಾರಿ ಎಂದು ಅಭಿಪ್ರಾಯಪಟ್ಟರು.
ಅಲ್ಪಸಂಖ್ಯಾತರು ಎಂಬ ಹೆಸರಿನಲ್ಲಿ ಕೆಲವು ಸಮುದಾಯಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ಇದರಿಂದ ಅಸಮಾನ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು.
ಪುರಿಯ ಜಗನ್ನಾಥ ದೇವಸ್ಥಾನವನ್ನು ಅಕ್ರಮವೆಂದು ಒಡೆಯುವುದನ್ನು ನಿಲ್ಲಿಸಬೇಕು. ಹಾನಿಯಾಗಿರುವ ಪ್ರಾಚೀನ ದೇವಸ್ಥಾನಗಳನ್ನು ಒಡಿಶಾ ಸರ್ಕಾರವು ಪುನಃ ನಿರ್ಮಿಸಬೇಕು. ಹಾನಿಗೊಳಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು. ನವದೆಹಲಿಯಲ್ಲಿ ಸಾವರ್ಕರ್ ಪ್ರತಿಮೆಗೆ ಕಪ್ಪುಮಸಿ ಬಳಿದವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಸಮನ್ವಯಕ ಶಿವರಾಮ ಮುಖಂಡರಾದ ರಮೇಶ್ ನಾಯಕ, ವಿನಯ್ ಗೌಡ, ಸೌಮ್ಯ, ಪೊನಮ್ಮ ಮೊದಲಾದವರು ಇದ್ದರು.