ಮೈಸೂರು: ಇದು ಬೇರೆ ಯಾವುದೋ ಬಡಾವಣೆಯ, ರಸ್ತೆಯ ಬದಿಯಲ್ಲಿ ಇಲ್ಲ. ಇದು ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಇರುವ ಕಸದ ರಾಶಿ.
ನಿತ್ಯ ನೂರಾರು ಮಂದಿ ಬಂದು ಹೋಗುವ ಜಿಲ್ಲಾಧಿಕಾರಿ ಕಚೇರಿ ಇಡೀ ಜಿಲ್ಲೆಯ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇದರ ಹೊರ ಆವರಣದಲ್ಲೇ ಬಿದ್ದಿರುವ ಕಸ ರಾಶಿ ಪಾಲಿಕೆಯ ಬೇಜವಾಬ್ದಾರಿಯನ್ನೂ ಪ್ರತಿಫಲಿಸುವಂತಿದೆ.
ಒಣಹುಲ್ಲು, ಒಣಗಿದ ಗಿಡಗಂಟಿಗಳು ಇಲ್ಲಿ ಹಲವು ದಿನಗಳಿಂದ ಬಿದ್ದಿದೆ. ಒಂದು ಗುಡ್ಡೆಯಷ್ಟು ಬಿದ್ದಿರುವ ಈ ತ್ಯಾಜ್ಯಕ್ಕೆ ಒಂದಿಷ್ಟು ಹಸಿ ತ್ಯಾಜ್ಯವೂ ಸೇರಿದೆ. ಇಲ್ಲಿ ಓಡಾಡುವವರು ಉಗಿಯುವುದು, ಕಸ ಹಾಕುವುದನ್ನು ಮಾಡುತ್ತಿರುತ್ತಾರೆ. ಇದರಿಂದ ಈ ಕಸದ ಗುಡ್ಡೆ ಬೆಳೆಯುತ್ತಲೇ ಇದೆ.
ಸದ್ಯ, ಒಂದು ತಿಂಗಳು ಕಳೆದು, ಮಳೆ, ಇಬ್ಬನಿ ನಿಲ್ಲುತ್ತಿದ್ದಂತೆ ಇಲ್ಲಿ ಒಂದು ಬೀಡಿ, ಸಿಗರೇಟ್ ಸೇವಿಸಿ ಎಸೆದರೆ ಸಾಕು ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಪಾಲಿಕೆ ಬೇರೆಲ್ಲೂ ಬೇಡ, ಕನಿಷ್ಠ ಜಿಲ್ಲಾಧಿಕಾರಿ ಕಚೇರಿ ಸುತ್ತಲಾದರೂ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿ, ಕಸ ಹಾಕುವುದಕ್ಕೆ ಪ್ರತ್ಯೇಕ ಬುಟ್ಟಿಯನ್ನು ಇಡಲಿ, ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಿ ಎಂದು ಇಲ್ಲಿ ಪ್ರತಿಭಟನೆಗೆಂದು ಬಂದಿದ್ದ ಹಿರಿಯ ನಾಗರಿಕ ರಾಮಯ್ಯ ಆಗ್ರಹಿಸಿದರು.