ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಕಟ್ಟಿರುವ ದೇಗುಲಗಳ ತೆರವು ಕಾರ್ಯಾಚರಣೆಗೆ ಭಾನುವಾರ ವಿವಿಧ ಸಂಘಟನೆಗಳಿಂದ ಪ್ರತಿರೋಧ ವ್ಯಕ್ತವಾಯಿತು.
ಇಲ್ಲಿನ ಅಗ್ರಹಾರದ ನೂರೊಂದು ಗಣಪತಿ ದೇಗುಲವನ್ನು ಸೆ. 22ರಂದು ತೆರವುಗೊಳಿಸಲಾಗುವುದು ಎಂದು ಜಿಲ್ಲಾಡಳಿತ ನೋಟಿಸ್ ನೀಡುತ್ತಿದ್ದಂತೆ ಬಿಜೆಪಿ ನಗರ ಘಟಕ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಂಸದ ಪ್ರತಾಪಸಿಂಹ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ‘1954ರಲ್ಲಿಯೇ ದೇಗುಲ ನಿರ್ಮಾಣ ವಾಗಿದೆ. 1964ರಲ್ಲಿ ಮುನ್ಸಿಪಾಲಿಟಿ ಕಾಯ್ದೆ ಜಾರಿಗೆ ಬಂದಿದೆ. ಈ ಕಾಯ್ದೆಗೂ ಮುಂಚೆಯೇ ದೇಗುಲ ಅಸ್ತಿತ್ವದಲ್ಲಿದೆ ಎಂದ ಮೇಲೆ ಅಕ್ರಮ ಹೇಗಾಗುತ್ತದೆ’ ಎಂದು ಪ್ರಶ್ನಿಸಿದರು.
‘2009ರ ನಂತರ ಕ್ಯಾತಮಾರನ ಹಳ್ಳಿ ಹಾಗೂ ಎನ್.ಆರ್.ಕ್ಷೇತ್ರದಲ್ಲಿ ಹಲವು ಮಸೀದಿ ಅನಧಿಕೃತವಾಗಿ ತಲೆ ಎತ್ತಿವೆ. ಇದು ಕೋರ್ಟ್ ಆದೇಶದ ಉಲ್ಲಂಘನೆ ಅಲ್ಲವೆ’ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ಪಾಲಿಕೆ ಸದಸ್ಯರಾದ ಶಿವಕುಮಾರ್, ಸೌಮ್ಯಾ ಉಮೇಶ್ ಕುಮಾರ್, ಬಿ.ವಿ.ಮಂಜುನಾಥ್, ಎಂ.ಯು.ಸುಬ್ಬಯ್ಯ, ಎಚ್.ಜಿ.ಗಿರಿಧರ್, ವಿ.ಸೋಮಸುಂದರ್, ವಾಣೀಶ್ ಕುಮಾರ್, ಕೆ.ಜೆ.ರಮೇಶ್, ಜೋಗಿ ಮಂಜು ಇದ್ದರು.
ಬಳೆ ತೊಡಿಸಿ ಪ್ರತಿಭಟನೆ: ಶಾಸಕ ತನ್ವೀರ್ಸೇಠ್ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಂಸದ ಪ್ರತಾಪಸಿಂಹ ಕಚೇರಿಯ ಬಾಗಿಲಿನ ಚಿಲಕಕ್ಕೆ ಬಳೆ ತೊಡಿಸಿ ಪ್ರತಿಭಟನೆ ನಡೆಸಿದರು.