ಮೈಸೂರು: ಕರ್ನಾಟಕ ಸಂಗೀತದ ‘ಪಕ್ಕವಾದ್ಯ’ಗಳಾದ ‘ಮೃದಂಗ’ ಹಾಗೂ ‘ತವಿಲ್’ಗಳ ಜುಗಲ್ಬಂದಿಯಲ್ಲಿ ಪುರಂದರ ದಾಸ, ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ್ ಸೇರಿದಂತೆ ವಾಗ್ಗೇಯಕಾರರ ಕೃತಿಗಳನ್ನು ಅಭಿಷೇಕ್ ರಘುರಾಂ ಹೂ ಬಿರಿಯುವಂತೆ ಅರಳಿಸಿದ ಪರಿಗೆ ಸಂಗೀತ ಪ್ರಿಯರು ತಲೆದೂಗಿದರು.
ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್’ (ಎಸ್ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆಯುತ್ತಿರುವ 61ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಸೋಮವಾರ ಅಭಿಷೇಕ್ ಗಾಯನವು ‘ರಾಗಾಭಿಷೇಕ’ದಲ್ಲಿ ಮೀಯುವಂತೆ ಮಾಡಿತು.
‘ಈಶ ಮನೋಹರಿ’ ರಾಗದಮುತ್ತುಸ್ವಾಮಿ ದೀಕ್ಷಿತರ ಕೃತಿ ‘ಶ್ರೀ ಗಣನಾಥಂ ಭಜರೇ’ಯೊಂದಿಗೆ ಅಭಿಷೇಕ್ ಕಛೇರಿಯನ್ನು ಆರಂಭಿಸಿದರು. ‘ಮೃದಂಗ’ದಲ್ಲಿ ವಿದ್ವಾನ್ ಅನಂತ ಆರ್.ಕೃಷ್ಣನ್ ಹಾಗೂ ‘ತವಿಲ್’ನಲ್ಲಿ ವಿದ್ವಾನ್ ಮನ್ನಾರ್ಗುಡಿ ವಾಸುದೇವನ್ ಸಾಥ್ ನೀಡಿದರು.
‘ದರ್ಬಾರ್’ ರಾಗದ ತ್ಯಾಗರಾಜರ ಕೃತಿ ‘ಮುಂದು ವೆನುಕಾ ಇರು’, ‘ಹಮೀರ್ ಕಲ್ಯಾಣಿ’ ರಾಗದ ಪುರಂದರ ದಾಸರ ‘ಶರಣು ಸಿದ್ದಿ ವಿನಾಯಕ’ ಕೃತಿಯನ್ನು ಹಾಡಿದರು. ನಂತರ ‘ಮಾಳವಿ’, ‘ತೋಡಿ’ ರಾಗ ತಾನ ಪಲ್ಲವಿಯನ್ನು ಪ್ರಸ್ತುತಪಡಿಸಿದರು. ಅಭಿಷೇಕ್ ನಾಲ್ಕು ಗಂಟೆಗಳ ಕಛೇರಿ ನೀಡಿದರು.
ಅದಕ್ಕೂ ಮುನ್ನ ಧನ್ಯಾ ಹಾಗೂ ಶ್ರೀನಿವಾಸ ಫಣಿ ಅವರು ‘ಕಂದರ್ಪ ಹರನಿಂದ ಬೆಂದುದು’ ಕಾವ್ಯವಾಚನ ಮಾಡಿದರು.