ಇಲ್ಲಿನ ಸುಬ್ಬರಾಯರ ಕೆರೆಯ ರಾಘವೇಂದ್ರಸ್ವಾಮಿಗಳ ಮಠದಲ್ಲಿ ನಸುಕಿನಿಂದಲೇ ಪೂಜಾಕೈಂಕರ್ಯಗಳು ಆರಂಭವಾದವು. ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಜಯಲಕ್ಷ್ಮೀಪುರಂನ ರಾಘವೇಂದ್ರಸ್ವಾಮಿ ಸೇವಾ ಸಮಿತಿಯಲ್ಲಿ ಪೂಜೆ, ಪುನಸ್ಕಾರಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು. ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿ ಅವರ ‘ದಾಸವಾಣಿ’ ಕಾರ್ಯಕ್ರಮ ಭಕ್ತವೃಂದವನ್ನು ಸೂರೆಗೊಂಡಿತು.
ಜೆ.ಪಿ.ನಗರದ ಪೇಜಾವರ ಅಧೋಕ್ಷಜ ಮಠದ ವಿಠ್ಠಲಧಾಮದಲ್ಲೂ ಅನೇಕ ಕಾರ್ಯಕ್ರಮಗಳು ನಡೆದವು. ಇವುಗಳಲ್ಲಿ ‘ಗುರುರಾಜವೈಭವ’ ಹಾಗೂ ‘ದಾಸ ವೈಭವ ಸಂಗೀತ ಕಾರ್ಯಕ್ರಮ’ಗಳು ಸೂಜಿಗಲ್ಲಿನಂತೆ ಸೆಳೆದವು.
ಸೋಮನಾಥನಗರದಲ್ಲಿ ಶ್ರೀ ಗುರುರಾಘವೇಂದ್ರ ಆರಾಧನಾ ಸಮಿತಿ ವತಿಯಿಂದ ರಾಘವೇಂದ್ರ ಅಷ್ಟಾಕ್ಷರ ಮಹಾಮಂತ್ರ ಹೋಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ರಾಘವೇಂದ್ರ ಸ್ವಾಮಿಗಳ ಮಠಗಳನ್ನು ವಿವಿಧ ಬಗೆಗಳಲ್ಲಿ ಸಿಂಗಾರಗೊಳಿಸಲಾಗಿತ್ತು. ಹಲವೆಡೆ ಪ್ರಸಾದ ವಿನಿಯೋಗಗಳು ನಡೆದವು. ಭಾನುವಾರ ಉತ್ತರಾರಾಧನೆ ನಡೆಯಲಿದೆ.