ಮೈಸೂರು: ನಟಿ ರಾಗಿಣಿ ಬಂಧನದಿಂದ ಬಿಜೆಪಿಗೆ ಮುಜುಗರವಾಗಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಇಲ್ಲಿ ಪ್ರತಿಕ್ರಿಯಿಸಿದರು.
‘ಡ್ರಗ್ ವಿಚಾರದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂದಿಲ್ಲ. ಯಾರು ಮಾಡಿದರೂ ತಪ್ಪೇ. ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.
‘ಚಲನಚಿತ್ರ ನಟ, ನಟಿಯರಿಗೆ ಸಮಾಜದಲ್ಲಿ ಜನಪ್ರಿಯತೆ ಇದೆ. ಅವರೇ ವ್ಯಸನಿಗಳಾದರೆ ಸಮಾಜಕ್ಕೆ ಯಾವ ಸಂದೇಶ ರವಾನೆ ಆಗುತ್ತದೆ? ಆದ್ದರಿಂದ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’ ಎಂದರು.
‘ಮುಖ್ಯಮಂತ್ರಿ ಅವರೇ ಸ್ವತಃ ಡ್ರಗ್ ಪ್ರಕರಣದ ವಿವರಗಳನ್ನು ನಿತ್ಯವೂ ಪಡೆಯುತ್ತಿದ್ದಾರೆ. ಎಷ್ಟೇ ಪ್ರಭಾವಿ ಇರಲಿ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದು ಸಚಿವರು ತಿಳಿಸಿದರು.
ತಿರುಗೇಟು: ‘ದಂಧೆಯ ಹಣದಿಂದ ಸರ್ಕಾರ ಬೀಳಿಸುವ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ. ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಈ ದಂಧೆ ಮಟ್ಟ ಹಾಕಬೇಕಿತ್ತು. ಆಗ ಸುಮ್ಮನಿದ್ದು, ಈಗ ಮಾತನಾಡಿದರೆ ಹೇಗೆ?’ ಎಂದು ತಿರುಗೇಟು ನೀಡಿದರು.