ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ, ನಂಜನಗೂಡು, ತಿ.ನರಸೀಪುರ, ಹುಣಸೂರು ಮತ್ತು ಎಚ್.ಡಿ.ಕೋಟೆ ತಾಲ್ಲೂಕುಗಳಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ.
ಹಲವೆಡೆ ಮಳೆಯಿಂದ ಜೋಳ, ತೊಗರಿ, ಅಲಸಂದೆ, ಹೆಸರು, ಉದ್ದು, ಎಳ್ಳು, ಹೊಗೆಸೊಪ್ಪು ಹಾಗೂ ಹತ್ತಿ ಬೆಳೆಗಳಿಗೆ ಸಹಕಾರಿಯಾಗಿದೆ. ತೋಟಗಾರಿಕಾ ಬೆಳೆಗಳೂ ಜೀವ ಪಡೆಯುವಂತಾಗಿದೆ. ಕೊಳವೆಬಾವಿಗಳಲ್ಲಿ ನೀರು ಹೆಚ್ಚುವ ನಿರೀಕ್ಷೆ ಇದೆ.
ಪಿರಿಯಾಪಟ್ಟಣದಲ್ಲಿ ಬೀಸಿದ ಬಿರುಗಾಳಿಗೆ ಮೂರು ಮರಗಳು ಧರೆಗುರುಳಿವೆ. ಇದರಿಂದ ಕುಶಾಲನಗರ ಮತ್ತು ಪಿರಿಯಾಪಟ್ಟಣ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ತಂಬಾಕು ಸಸಿಗಳಿಗೆ ಆಲಿಕಲ್ಲು ಮಳೆಯಿಂದ ಹಾನಿಯಾಗಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರದಲ್ಲಿ ಬಿರುಗಾಳಿ ಮಳೆಗೆ ಹಲವೆಡೆ ಬಾಳೆ ಮತ್ತು ಕಬ್ಬು ಬೆಳೆಗಳು ನಾಶಗೊಂಡಿವೆ.