ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿಯೂ ವರ್ಷಧಾರೆಯ ಅಬ್ಬರ ಮುಂದುವರೆಯಿತು.
ಮೈಸೂರಿನಲ್ಲಿ ರಾತ್ರಿ 8.20ರ ಆಸುಪಾಸಿಗೆ ಆರಂಭಗೊಂಡ ಮಳೆ, ಬಿರುಗಾಳಿ–ಗುಡುಗು–ಸಿಡಿಲಬ್ಬರದೊಂದಿಗೆ ಸುರಿಯಿತು.
ಮೈಸೂರು ತಾಲ್ಲೂಕಿನ ವಿವಿಧೆಡೆಯೂ ಮಳೆಯ ಆರ್ಭಟ ಬಿರುಸಿತ್ತು. ವರುಣಾ ಹೋಬಳಿಯ ಮೆಲ್ಲಹಳ್ಳಿ, ವರಕೋಡು, ವಾಜಮಂಗಲ, ನಾಡನಹಳ್ಳಿ, ದೇವಲಾಪುರ ಗ್ರಾಮ ಸೇರಿದಂತೆ ಇನ್ನಿತರೆಡೆ ಮಳೆ ಸುರಿಯಿತು.
ಪಿರಿಯಾಪಟ್ಟಣವೂ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಳೆ ಸುರಿದಿದೆ. ಹನಗೋಡು ಭಾಗದಲ್ಲಿ ಆಲಿಕಲ್ಲು ಮಳೆ ಬಿದ್ದಿದೆ. ನಂಜನಗೂಡಿನಲ್ಲಿ ಮಳೆಗಿಂತ ಗಾಳಿಯ ಅಬ್ಬರವೇ ಹೆಚ್ಚಿತ್ತು. ಕೆ.ಆರ್.ನಗರದಲ್ಲಿ ಗುಡುಗಿನ ಅಬ್ಬರ ಜೋರಿತ್ತು. ಸಾಧಾರಣ ಮಳೆಯಾಗಿದೆ.
ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಮಳೆಗಿಂತ ಗುಡುಗು–ಮಿಂಚಿನ ಆರ್ಭಟವೇ ಹೆಚ್ಚಿತ್ತು. ಇದೀಗ ಸುರಿಯುತ್ತಿರುವ ಮಳೆ, ಮುಂಗಾರು ಪೂರ್ವ ಬೆಳೆಗಳಿಗೆ ಅನುಕೂಲಕಾರಿಯಾಗಿದೆ.