ವರುಣಾ: ಮಳೆ ಹಾಗೂ ರೋಗ ಭಾದೆಯಿಂದಾಗಿ ಈ ಬಾರಿ ಮಾವಿನ ಫಸಲು ನಿರೀಕ್ಷೆ ಮಟ್ಟದಲ್ಲಿ ಬರದೆ ರೈತರು ಕಂಗಾಲಾಗಿದ್ದಾರೆ.
ವರುಣಾ ಭಾಗದ ವರಕೋಡು, ಕುಪ್ಪೇಗಾಲ, ತಗಡೂರು, ಆಯರಹಳ್ಳಿ, ಚೋರನಹಳ್ಳಿ, ದಂಡಿಕೆರೆ ಕೆಂಪಯ್ಯನಹುಂಡಿ ಇನ್ನಿತರ ಭಾಗದಲ್ಲಿ ಮಾವಿನ ತೋಟಗಳಲ್ಲಿ ನಿರೀಕ್ಷೆಯಂತೆ ಫಲ ಬಿಟ್ಟಿಲ್ಲ ಎನ್ನುತ್ತಾರೆ ರೈತರು.
ಕಳೆದ ಬಾರಿ ಬಾವಲಿ ಹಕ್ಕಿ ರೋಗದ ಭೀತಿ ಇತ್ತು. ಈ ಬಾರಿ ಹೂ ಬಿಡುವ ಸಂದರ್ಭದಲ್ಲಿ ಗಿಡಗಳು ಚಿಗುರು ಬಿಟ್ಟಿದ್ದರಿಂದ ಫಸಲು ಕಡಿಮೆಯಾಗಲು ಕಾರಣವಾಯಿತು ಎನ್ನುತ್ತಾರೆ ವರಕೋಡು ಮಾವು ಬೆಳೆಗಾರ ಪುಟ್ಟನಾಯ್ಕ.
ಈ ಭಾಗದಲ್ಲಿ ಬಾದಾಮಿ, ರಸಪೂರಿ, ಮಲ್ಲಿಕಾ ಹಾಗೂ ಇನ್ನಿತರ ಜಾತಿಯ ಮರಗಳು ಹೆಚ್ಚಿವೆ.
‘ಕೆಲವು ಭಾಗದಲ್ಲಿ ಮಳೆ ಕೊರತೆ ಹಾಗೂ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಫಸಲು ಕೈಕೊಟ್ಟಿದೆ’ ಎನ್ನುತ್ತಾರೆ ವರಕೋಡು ಮಲ್ಲೇಶ್.
ಕೋತಿಗಳು ಕೂಡ ದಾಳಿ ಮಾಡಿ ಇನ್ನಷ್ಟು ನಷ್ಟ ಮಾಡುತ್ತಿವೆ ಎಂಬುದು ಈ ಭಾಗದ ರೈತರ ಅಳಲಾಗಿದೆ.