ಮೈಸೂರು: ‘ಆಶ್ರಯ ಯೋಜನೆ ಫಲಾನುಭವಿಗಳು ಮನೆಗಳನ್ನು ಯಾವುದೇ ಕಾರಣಕ್ಕೂ ಮಾರಬಾರದು. ಕೆಲವರು ತೋರುವ ಹೆಚ್ಚಿನ ಹಣದ ಆಮಿಷಕ್ಕೆ ಬಲಿಯಾಗಬಾರದು’ ಎಂದು ಶಾಸಕ ಎಸ್.ಎ. ರಾಮದಾಸ್ ಕೋರಿದರು.
ಮಹಾನಗರಪಾಲಿಕೆ ಸಭಾಂಗಣದಲ್ಲಿ ಗೊರೂರು ಭಾಗದ 1 ರಿಂದ 8 ಬ್ಲಾಕ್ ಮತ್ತು ರಮಾಬಾಯಿನಗರದ ಆಶ್ರಯ ಮನೆಗಳ ನಿವಾಸಿಗಳಿಗೆ ಹಕ್ಕುಪತ್ರ ಮತ್ತು ಹಕ್ಕುಖುಲಾಸೆಯ ಪತ್ರವನ್ನು ವಿತರಿಸುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಒಟ್ಟು 3,850 ಮಂದಿ ಫಲಾನುಭವಿಗಳಿದ್ದಾರೆ. ಅವರಲ್ಲಿ ಯಾರು ಹಕ್ಕುಪತ್ರ ಮತ್ತು ಹಕ್ಕು ಖುಲಾಸೆ ಪತ್ರವನ್ನು ಪಡೆಯಲು ಅರ್ಹರಿದ್ದಾರೆಯೋ ಅವರೆಲ್ಲರಿಗೂ ವಿತರಿಸಲಾಗುತ್ತದೆ. ಈಗಾಗಲೇ ನಿರ್ಣಯಿಸಿದಂತೆ, ಸಂಪೂರ್ಣವಾಗಿ ಹಣ ಕಟ್ಟದೇ ಇರುವಂತಹ ಫಲಾನುಭವಿಗಳಿಗೆ ಕಟ್ಟಬೇಕಾಗಿರುವ ಹಣವನ್ನು ಮನ್ನಾ ಮಾಡಿ ಅವರಿಗೂ ಹಕ್ಕುಪತ್ರ ಮತ್ತು ಹಕ್ಕು ಖುಲಾಸೆ ಪತ್ರವನ್ನು ನೀಡಲಾಗುತ್ತದೆ’ ಎಂದು ತಿಳಿಸಿದರು.
‘ಮನೆಯ ಸಂಪೂರ್ಣ ಹಕ್ಕನ್ನು ಪಡೆದವರು ಅಲ್ಲಿ ವಾಸಿಸಬೇಕು’ ಎಂದರು.
ಸಾಂಕೇತಿಕವಾಗಿ 100 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ಮಹಾನಗರ ಪಾಲಿಕೆಯ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಹೆಚ್ಚುವರಿ ಆಯುಕ್ತೆ ರೂಪಾ, ಆಶ್ರಯ ಸಮಿತಿಯ ಸದಸ್ಯರಾದ ಹೇಮಂತ್ ಕುಮಾರ್, ನಗರಪಾಲಿಕೆ ಸದಸ್ಯರಾದ ಬಿ.ವಿ. ಮಂಜುನಾಥ್, ಛಾಯಾದೇವಿ, ಸೌಮ್ಯಾ ಉಮೇಶ್, ಪಿ.ಟಿ. ಕೃಷ್ಣ ಉಪಸ್ಥಿತರಿದ್ದರು.