ಮೈಸೂರು: ಅನೇಕ ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು. ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಸಾರ್ವಜನಿಕರು ಶಾಸಕ ಜಿ.ಟಿ.ದೇವೇಗೌಡ ಅವರನ್ನು ಆಗ್ರಹಿಸಿದರು.
ಇಲ್ಲಿನ ಹೊರವಲಯದ ಆರ್.ಸಿ ಬಡಾವಣೆಗೆ ಶಾಸಕ ಜಿ.ಟಿ. ದೇವೇಗೌಡ ಮಂಗಳವಾರ ಭೇಟಿ ನೀಡಿದಾಗ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಮುಂದಿಟ್ಟರು.
ವಿಜಯನಗರ4ನೇ ಹಂತಕ್ಕೆ ಹೊಂದಿಕೊಂಡಂತೆ ಇರುವ ಆರ್.ಸಿ. ಬಡಾವಣೆಯಲ್ಲಿ ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಇದರಿಂದ ಪ್ರತಿ ಮಳೆಗಾಲದಲ್ಲೂ ನಿವಾಸಿಗಳು ಪರದಾಡುತ್ತಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ಯಾವಾಗ ಎಂದು ಪ್ರಶ್ನಿಸಿದರು .
ಇನ್ನೂ ಈ ಭಾಗದಲ್ಲಿ ಸಮರ್ಪಕವಾಗಿ ಒಳಚರಂಡಿ ನಿರ್ಮಿಸಿಲ್ಲ. ಕೂಡಲೇ ಯುಜಿಡಿ ಸಂಪರ್ಕ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಈ ಭಾಗದಲ್ಲಿ ಒಟ್ಟು 8 ಬಡಾವಣೆಗಳಿದ್ದು, ಹಲವು ವರ್ಷದಿಂದಲೂ ಕುಡಿಯುವ ನೀರು, ಬೀದಿ ದೀಪ, ಯುಜಿಡಿ, ರಸ್ತೆ ಹಾಗೂ ರಾಜಕಾಲುವೆ ಅತ್ಯಂತ ಪ್ರಮುಖ ಸಮಸ್ಯೆಯಾಗಿದೆ. ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಇದ್ದರು.