ಹುಣಸೂರು: ಮರಗಳ್ಳರು ತೋಟದಲ್ಲಿ ಬಚ್ಚಿಟ್ಟಿದ್ದ ಬೀಟೆ ಮರದ ದಿಮ್ಮಿಯನ್ನು ಅರಣ್ಯ ಇಲಾಖೆ ಗುರುವಾರ ರಾತ್ರಿ ದಾಳಿ ನಡೆಸಿ ವಶಪಡಿಸಿಕೊಂಡಿದೆ.
ನಗರದ ಕಾಫಿ ವರ್ಕ್ಸ್ ಬಳಿಯ ಅಡಿಕೆ ತೆಂಗಿನ ತೋಟದಲ್ಲಿ ಬೀಟೆ ಮರದ ದಿಮ್ಮಿ ಸಂಗ್ರಹಿಸಿಟ್ಟ ಮಾಹಿತಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸಂಗ್ರಹಿಸಿದ್ದ 8 ಮರದ ದಿಮ್ಮಿಯನ್ನು ವಶಕ್ಕೆ ಪಡೆದರು.
ಈ ಸಂಬಂಧ ತೋಟದ ಮಾಲೀಕರು ತಮಗೆ ಮರ ಸಂಗ್ರಹಿಸಿಟ್ಟಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಡುರಾತ್ರಿ ಟ್ರಾಕ್ಟರ್ ಓಡಾಡುತ್ತಿದ್ದ ಶಬ್ದ ಕೇಳಿಸಿತ್ತು ಎಂದು ತಿಳಿಸಿದ್ದಾರೆ.
ಪ್ರಾದೇಶಿಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಸಂದೀಪ್ ನೇತೃತ್ವದಲ್ಲಿ ಜಪ್ತಿ ಮಾಡಿ ಇಲಾಖೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ವಶಪಡಿಸಿಕೊಂಡ ಬೀಟೆ ಮರವನ್ನು ಕಲ್ಲಬೆಟ್ಟ ಮರ ಸಂಗ್ರಹ ಸ್ಥಳಕ್ಕೆ ರವಾನಿಸಲಾಗಿದೆ.