ಮೈಸೂರು: ಚಾಲನಾ ತರಬೇತಿ ಶಾಲೆಯ ಪರವಾನಗಿ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ₹ 5 ಸಾವಿರ ಲಂಚ ಪಡೆದಿದ್ದ ಪ್ರಾದೇಶಿಕ ಸಾರಿಗೆ ಆಯುಕ್ತ ಪದ್ಮ ಪ್ರಸಾದ್ ಹಾಗೂ ಮಧ್ಯವರ್ತಿ ದಯಾನಂದ್ ಎಂಬುವವರಿಗೆ ಇಲ್ಲಿನ 3ನೇ ಹೆಚ್ಚುವರಿ ವಿಶೇಷ ನ್ಯಾಯಾಲಯ 4 ವರ್ಷಗಳ ಶಿಕ್ಷೆ ಹಾಗೂ ₹ 5 ಸಾವಿರ ದಂಡ ವಿಧಿಸಿದೆ.
ಪದ್ಮ ಪ್ರಸಾದ್ ಅವರು ಇಲ್ಲಿ 2015ರಲ್ಲಿ ಪ್ರಾದೇಶಿಕ ಸಾರಿಗೆ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವಾಗ ವ್ಯಕ್ತಿಯೊಬ್ಬರಿಂದ ₹ 5 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ನಂತರ, ಇವರು ಸೇವೆಯಿಂದ ನಿವೃತ್ತರಾಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಭರತ್ಕುಮಾರ್ ಆರೋಪಿಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಮುತ್ತಮ್ಮ ವಾದ ಮಂಡಿಸಿದ್ದರು.