ಮೈಸೂರು: ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದು, ಆರೋಗ್ಯ ಸೇವೆ ಉತ್ತಮಪಡಿಸಲು ಜಿಲ್ಲಾಡಳಿತಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಹರಿಹಾಯ್ದರು.
ಕೋವಿಡ್ ಬಂದು ಒಂದು ವರ್ಷ ಕಳೆದಿದೆ. ಈ ಅವಧಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ಎಷ್ಟು ವೈದ್ಯರು, ನರ್ಸ್ಗಳ ನೇಮಕ ಆಗಿದೆ, ಎಷ್ಟು ಐಸಿಯು, ವೆಂಟಿಲೇಟರ್ ಸೌಲಭ್ಯಗಳನ್ನು ಅಳವಡಿಸಿದ್ದೀರಿ ಎಂಬುದನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
‘ನನಗೆ ಇರುವ ಮಾಹಿತಿ ಪ್ರಕಾರ ಮೈಸೂರು ನಗರ ಮತ್ತು ತಾಲ್ಲೂಕುಗಳಲ್ಲಿನ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿರುವುದು 150 ವೆಂಟಿಲೇಟರ್ಗಳು ಮಾತ್ರ. ತಾಲ್ಲೂಕುಗಳಲ್ಲಿ 5–6 ಇದ್ದರೂ ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಳೆದ ಒಂದು ವರ್ಷದಿಂದ ಏನು ಮಾಡ್ತಾ ಇದ್ದೀರಿ? ನಿಮಗೆ ಮನಃಸಾಕ್ಷಿ ಇಲ್ಲವೇ?’ ಎಂದು ಕಿಡಿಕಾರಿದರು.
‘ಕೋವಿಡ್ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದು ಇಷ್ಟು ದಿನ ಸುಮ್ಮನಿದ್ದೆವು. ಇವತ್ತು ಅಥವಾ ನಾಳೆ ಪರಿಸ್ಥಿತಿ ಸುಧಾರಿಸಬಹುದು ಎಂದು ಮಾತನಾಡಿರಲಿಲ್ಲ. ಆದರೆ ವರ್ಷ ಕಳೆದರೂ ಸುಧಾರಿಸದ ಕಾರಣ ಮಾತನಾಡುತ್ತಿದ್ದೇನೆ. ಜಿಲ್ಲಾಡಳಿತ ಸತ್ತು ಹೋಗಿದೆಯಾ, ಉಸ್ತುವಾರಿ ಸಚಿವರು ಬದುಕಿದ್ದೀರಾ’ ಎಂದು ಪ್ರಶ್ನಿಸಿದರು.
‘ಮೈಸೂರಿನಲ್ಲೇ ಪೋಸ್ಟಿಂಗ್ ಬೇಕು ಎಂದು ಬಂದವರು ಏನು ಮಾಡ್ತಾ ಇದ್ದೀರಿ? ಜನರ ಸೇವೆ ಎಂಬುದು ಗ್ಯಾರೇಜಲ್ಲಿ ಕಾರಿಗೆ ಟೈರ್ ಹಾಕಿಸಿ ವಿಡಿಯೊ ಮಾಡಿ ಪ್ರಚಾರ ಪಡೆದ ಹಾಗಲ್ಲ’ ಎಂದು ಪರೋಕ್ಷವಾಗಿ ಜಿಲ್ಲಾಧಿಕಾರಿ ಕುಟುಕಿದರು.
ವೆಂಟಿಲೇಟರ್ ಇಲ್ಲದೆ ಸಾವು: ಆರೋಪ
‘ಕೆ.ಆರ್.ನಗರದ 36 ವರ್ಷದ ಮಹಿಳೆಯೊಬ್ಬರನ್ನು ಮಂಗಳವಾರ ಮಧ್ಯಾಹ್ನ 2ರ ವೇಳೆಗೆ ಕೆ.ಆರ್.ಆಸ್ಪತ್ರೆಗೆ ಕರೆತಂದಿದ್ದೆವು. ಚಿಕಿತ್ಸೆಗೆ ಸ್ಪಂದಿಸದೆ ಅವರು ಬುಧವಾರ ಬೆಳಗಿನ ಜಾವ 3 ಗಂಟೆಗೆ ಮೃತಪಟ್ಟಿದ್ದಾರೆ. ವೆಂಟಿಲೇಟರ್ ಸೌಲಭ್ಯ ದೊರೆಯದಿರುವುದೇ ಸಾವಿಗೆ ಕಾರಣ’ ಎಂದು ಸಾ.ರಾ.ಮಹೇಶ್ ಆರೋಪಿಸಿದರು.
‘ಮಹಿಳೆಯ ಆಮ್ಲಜನಕಮಟ್ಟ ಕಡಿಮೆಯಿದೆ ಎಂದು ವೈದ್ಯರು ಅಡ್ಮಿಟ್ ಮಾಡಿದ್ದರು. ಸದ್ಯಕ್ಕೆ ವೆಂಟಿಲೇಟರ್ ಖಾಲಿಯಿಲ್ಲ ಎಂಬ ವಿಷಯವನ್ನೂ ನನ್ನ ಗಮನಕ್ಕೆ ತಂದಿದ್ದರು. ಆದ್ದರಿಂದ ಕೆ.ಆರ್.ನಗರದಿಂದ ಎರಡು ವೆಂಟಿಲೇಟರ್ಗಳನ್ನು ತರಿಸಿ ಮಂಗಳವಾರ ರಾತ್ರಿಯೇ ಕೆ.ಆರ್.ಆಸ್ಪತ್ರೆಗೆ ನೀಡಿದ್ದೆವು. ಡಿಎಚ್ಒ ಅವರಿಗೆ ಐದು ಸಲ ಕರೆ ಮಾಡಿ ಮಾತನಾಡಿದ್ದೆ. ವೆಂಟಿಲೇಟರ್ ಅಳವಡಿಸಲು ಮೆಕ್ಯಾನಿಕ್ ಇಲ್ಲದ ಕಾರಣ ಬುಧವಾರ ಬೆಳಿಗ್ಗೆ ಸಿದ್ಧಪಡಿಸಿಕೊಡುವುದಾಗಿ ಅವರು ಹೇಳಿದರು. ಆದರೆ ಅಷ್ಟೊತ್ತಿಗೆ ಮಹಿಳೆ ಮೃತಪಟ್ಟಿದ್ದಾರೆ’ ಎಂದರು.