ಸಾಲಿಗ್ರಾಮ (ಮೈಸೂರು): ‘ಕಳೆದ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನದಂದು ಶುರುವಾದ ಕಿರುಕುಳ ಸಚಿವನಾದ ಮೇಲೂ ನಿಲ್ಲಲಿಲ್ಲ. ಇದರಿಂದ ತುಂಬಾ ನೊಂದಿರುವೆ’ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ನೋವು ತೋಡಿಕೊಂಡರು.
‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ನಗರ ಕ್ಷೇತ್ರ ಬಿಟ್ಟು ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂಬ ವದಂತಿ ಹಬ್ಬಿಸಿದ್ದಾರೆ. ಇದರಿಂದ ಮತ್ತಷ್ಟು ನೋವಾಗಿದೆ’ ಎಂದು ಶನಿವಾರ ಹೇಳಿದರು.
‘ಕೆ.ಆರ್.ನಗರ ಕ್ಷೇತ್ರವೇ ನನ್ನ ಕರ್ಮಭೂಮಿ. ನಾನು ಬದುಕಿರುವ ತನಕ ನನಗೆ ರಾಜಕೀಯ ನಾಯಕ ಎಂದರೆ ಅದು ಎಚ್.ಡಿ.ಕುಮಾರಸ್ವಾಮಿ. ರಾಜಕೀಯ ಬೇಸರ ಎನಿಸಿದರೆ ಈ ಕ್ಷೇತ್ರದಿಂದ ದೂರ ಉಳಿದುಬಿಡುವೆ’ ಎಂದು ಭಾವುಕರಾದರು.