ಶಾಲೆ ಆರಂಭ ಎನ್ನುವುದು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಒಂದು ರೀತಿಯ ಸಂತೋಷದ ಸಮಯ ಎಂದರೆ ತಪ್ಪಾಗಲಾರದು. ಕೆಲ ಪೋಷಕರು ಆತಂಕಪಡುವ ಸಮಯವೂ ಹೌದು. ಶಾಲೆ ತೆರೆಯುವ ಮುನ್ನ ಪೋಷಕರು ಮುನ್ನೆಚ್ಚರಿಕೆ ತೆಗೆದುಕೊಂಡರೆ ಆತಂಕವಿಲ್ಲದೆ ಆನಂದದಿಂದ ಶಾಲೆಗೆ ಕಳುಹಿಸಬಹುದು.
ಮೊದಲನೆಯದಾಗಿ ಶಾಲೆಗೆ ಹೋಗಲು ಮಕ್ಕಳನ್ನು ಮಾನಸಿಕವಾಗಿ ಸಿದ್ಧ ಮಾಡಬೇಕು. ಕೆಲವು ಮಕ್ಕಳು ಶಾಲೆಗೆ ಹೊರಡಲು ಹಠ ಹಿಡಿಯುತ್ತಾರೆ. ಆ ಮಕ್ಕಳನ್ನು ತಾಳ್ಮೆಯಿಂದ ಓಲೈಸಬೇಕು. ಮಕ್ಕಳ ದಿನಚರಿಯಲ್ಲಿ ಬದಲಾವಣೆ ತರಬೇಕು.
ಪ್ರವಾಸಕ್ಕೆ ಹೋಗಿದ್ದರೆ ಒಂದು ವಾರ ಮುಂಚಿತವಾಗಿ ಮನೆ ಸೇರಬೇಕು. ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಮಾಡಿಸಬೇಕು. ಸಮವಸ್ತ್ರ, ಪುಸ್ತಕ, ಛತ್ರಿ, ರೈನ್ಕೋಟ್ ಅನ್ನು ಸಿದ್ಧ ಮಾಡಿಕೊಳ್ಳಬೇಕು. ಜೂನ್ನಲ್ಲಿ ಮಳೆಗಾಲ ಇರುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ. ಮನೆಯಿಂದ ಶಾಲೆಯ ದಾರಿ ತಿಳಿಸಿರಬೇಕು. ಆಟೊ, ಬಸ್ ವ್ಯವಸ್ಥೆಯನ್ನು ಮುಂಚಿತವಾಗಿ ಮಾಡಿ ಚಾಲಕರ ಸಂಪರ್ಕ ಸಂಖ್ಯೆಯನ್ನು ತಿಳಿಸಿರಬೇಕು. ಶಾಲೆಯ ವಾತಾವರಣ, ಗುರುಗಳ ಬಗ್ಗೆ ಸಕಾರಾತ್ಮಕವಾಗಿ
ಮಾತನಾಡಬೇಕು.
ಊಟದ ಡಬ್ಬಿಯನ್ನು, ನೀರನ್ನು ಸ್ಟೀಲ್ ಡಬ್ಬಿಯಲ್ಲಿ ಕಳುಹಿಸಬೇಕು. ಮಕ್ಕಳಿಗೆ ಮನೆಯ ವಿಳಾಸ, ತಂದೆ ತಾಯಿಯ ಫೊನ್ ನಂಬರ್, ಕುಟುಂಬದ ವೈದ್ಯರ ವಿವರ ತಿಳಿದಿರಬೇಕು. ರಕ್ತದ ಗುಂಪನ್ನೂ ಮಕ್ಕಳಿಗೆ ತಿಳಿಸಿರಬೇಕು.
ರಜೆಯಲ್ಲಿ ತಾನು ನೋಡಿದ ಊರಿನ ಬಗ್ಗೆ ವಿವರ, ರಜೆಯಲ್ಲಿ ಕಲಿತ ವಿದ್ಯೆಗಳನ್ನು ಶಾಲೆಯಲ್ಲಿ ಧೈರ್ಯವಾಗಿ ಹೇಳಬೇಕು. ಇದರಿಂದ ಮತ್ತೊಬ್ಬರಿಗೆ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ.
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಮಕ್ಕಳಲ್ಲಿ ಬೆಳೆಸಬೇಕು. ಶಾಲೆಯಲ್ಲಿ ತೊಂದರೆಯಾದರೆ ಧೈರ್ಯವಾಗಿ, ಗುರುಗಳಿಗೆ ಪೋಷಕರಿಗೆ ತಿಳಿಸಬೇಕು. ಅರ್ಥವಾಗದ ವಿಷಯಗಳನ್ನು ಧೈರ್ಯವಾಗಿ ಗುರುಗಳಿಗೆ ತಿಳಿಸಬೇಕು. ಪ್ರತಿ ವಿಷಯವೂ ಪಾರದರ್ಶಕವಾಗಿರಬೇಕು. ಮಕ್ಕಳನ್ನು ಪೋಷಕರು, ಸ್ವಾವಲಂಬಿಯಾಗಿ ಬೆಳೆಸಬೇಕು. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂದಾಗಬೇಕು. ಜೀವನದ ಮೌಲ್ಯ
ತಿಳಿಸಬೇಕು.
ಬೇರೆ ಊರಿನಲ್ಲಿ ಹಾಸ್ಟೆಲ್ಗೆ ಸೇರಿಸುವ ಸಂದರ್ಭ ಬಂದರೆ, ಅದಕ್ಕೆ ಮಕ್ಕಳನ್ನು ಸಿದ್ಧಗೊಳಿಸಿರಬೇಕು. ಹಾಸ್ಟೆಲ್, ಶಾಲೆ, ಬಂಧುಗಳ ಮನೆಗೆ ಹತ್ತಿರವಿರಬೇಕು, ಹಾಸ್ಟೆಲ್ನಲ್ಲಿ ಎಲ್ಲ ತರಹದ ಹುಡುಗರು ಇರುವುದರಿಂದ ಒಳ್ಳೆಯ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.