ಮೈಸೂರು: ‘ಟಿಪ್ಪು ಜಯಂತಿ ವಿರೋಧಿಸುತ್ತಿರುವ ಬಿಜೆಪಿಯವರು ಗೋಮುಖ ವ್ಯಾಘ್ರಗಳು. ಅವರಿಗೆ ಎರಡು ಮುಖ, ಎರಡು ನಾಲಗೆಗಳಿವೆ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಮಯ್ಯ ಇಲ್ಲಿ ಶನಿವಾರ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಕೆಜೆಪಿಯಲ್ಲಿ ಇದ್ದಾಗ ಟಿಪ್ಪು ಜಯಂತಿ ಆಚರಣೆ ಮಾಡಿದ್ದರು. ಅವರನ್ನು ಏನೆಂದು ಕರೆಯಲಿ, ‘ಯಡ್ಡಿ ಖಾನ್’ ಎನ್ನಬೇಕೇ ಎಂದು ಪ್ರಶ್ನಿಸಿದರು.
ಶೇಕ್ ಅಲಿ ಅವರು ಟಿಪ್ಪು ಬಗ್ಗೆ ಬರೆದ ಕೃತಿಗೆ ಮುನ್ನುಡಿ ಬರೆದಿರುವುದು ಜಗದೀಶ್ ಶೆಟ್ಟರ್. ಅವರನ್ನು ಯಾವ ಖಾನ್ ಎನ್ನಬೇಕು. ಆರ್.ಅಶೋಕ್, ಶ್ರೀರಾಮುಲು ಎಲ್ಲರೂ ಟಿಪ್ಪು ಪೇಟಾ ಹಾಕಿಕೊಂಡು ಕಾಣಿಸಿಕೊಂಡಿದ್ದರು. ಅವರನ್ನೆಲ್ಲ ಯಾವ ಹೆಸರಿನಿಂದ ಕರೆಯಲಿ? ಎಂದು ವ್ಯಂಗ್ಯವಾಡಿದರು.
ಮನುಷ್ಯತ್ವ ಇಲ್ಲ: ‘ಸಿದ್ದರಾಮಯ್ಯ ಟಿಪ್ಪುವಿಗಿಂತ ದೊಡ್ಡ ಮತಾಂಧ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕೋಮುವಾದಿಗಳಿಗೆ ಮಾತ್ರ ಅಂತಹ ಹೇಳಿಕೆ ನೀಡಲು ಸಾಧ್ಯ. ಇನ್ನೊಂದು ಧರ್ಮ, ಮನುಷ್ಯರನ್ನು ದ್ವೇಷಿಸುವವರೇ ಕೋಮುವಾದಿಗಳು. ಮನುಷ್ಯತ್ವ ಇಲ್ಲದವರು ನನ್ನನ್ನು ಆ ರೀತಿ ಟೀಕಿಸುತ್ತಾರೆ’ ಎಂದರು.
ಕುಮಾರಸ್ವಾಮಿ ಭಾಗವಹಿಸಬೇಕಿತ್ತು: ‘ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸದೇ ಇರುವುದರಿಂದ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನ ಉಂಟಾಗಿದೆ’ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.