ಮೈಸೂರು: ‘ಸಂಸದ ಪ್ರತಾಪಸಿಂಹ ಜೊತೆ ಎಚ್ಚರಿಕೆಯಿಂದ ಇರುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದರು’ ಎಂದು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಬುಧವಾರ ಇಲ್ಲಿ ಬಹಿರಂಗಪಡಿಸಿದರು.
‘ದಸರೆ ಸಿದ್ಧತೆ ಸಂಬಂಧ ದೂರವಾಣಿಯಲ್ಲಿ ಅವರೊಂದಿಗೆ ಒಮ್ಮೆ ಚರ್ಚಿಸುತ್ತಿರುವಾಗ, ‘ನಿಮ್ಮ ಪ್ರತಾಪಸಿಂಹ ಬಲು ಹುಷಾರ್ ಇದ್ದಾನೆ. ಆತನನ್ನು ಸುಲಭವಾಗಿ ನಂಬಬೇಡ’ ಎಂದು ಕಿವಿಮಾತು ಹೇಳಿದ್ದರು’ ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದಾಗ, ಅವರ ಪಕ್ಕದಲ್ಲೇ ಕುಳಿತಿದ್ದ ಪ್ರತಾಪಸಿಂಹ ನಗು ಬೀರಿದರು.
ಎಡವಟ್ಟಾಗಿದೆ: ‘ಪಾಸ್ ವ್ಯವಸ್ಥೆಯಲ್ಲಿ ಎಡವಟ್ಟಾಗಿರುವುದು ನಿಜ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ’ ಎಂದು ತಿಳಿಸಿದರು.
ದಸರಾ ಮಂತ್ರಿ: ‘ಇದುವರೆಗೆ ನಾನು ದಸರಾ ಮಂತ್ರಿ ಆಗಿದ್ದೆ. ಇಂದಿನಿಂದ ನಿಜವಾದ ಮಂತ್ರಿ ಆಗಿ ಕರ್ತವ್ಯ ನಿಭಾಯಿಸುತ್ತೇನೆ. ಪ್ರವಾಹಪೀಡಿತ ಸ್ಥಳಗಳಿಗೆ ಹೋಗಿ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುತ್ತೇನೆ’ ಎಂದರು.