ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರಿನಲ್ಲಿ ಸಿದ್ದರಾಮಯ್ಯಗೆ ಮತ್ತೆ ಮುಖಭಂಗ

ಬೆಂಬಲಿಗ ಅಭ್ಯರ್ಥಿ ಸೋಲು–ವಿರೋಧಿಗಳ ಖೆಡ್ಡಾಕ್ಕೆ ಬಿದ್ದ ಸಮನ್ವಯ ಸಮಿತಿ ಅಧ್ಯಕ್ಷ
Last Updated 23 ಮೇ 2019, 19:11 IST
ಅಕ್ಷರ ಗಾತ್ರ

ಮೈಸೂರು: ‌ವಿಧಾನಸಭಾ ಚುನಾವಣೆ ವೇಳೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ‌ಮುಖಭಂಗ ಅನುಭವಿಸಿದ್ದ ಸಿದ್ದರಾಮಯ್ಯ, ವರ್ಷ ಕಳೆಯುವಷ್ಟರಲ್ಲಿ ಮತ್ತೆ ತವರಿನಲ್ಲಿ ಆಘಾತ ಅನುಭವಿಸಿದ್ದಾರೆ.

ಜೆಡಿಎಸ್‌ ಬೇಡಿಕೆಗೂ ಜಗ್ಗದೆ, ಪಟ್ಟು ಹಿಡಿದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಅವರು ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಅದಕ್ಕಾಗಿ ತಮ್ಮದೇ ಪಕ್ಷದ ಸಂಸದರಿದ್ದ ತುಮಕೂರು ಕ್ಷೇತ್ರವನ್ನು ತ್ಯಾಗ ಮಾಡಿದ್ದರು. ಜೊತೆಗೆ ಕುರುಬ ಸಮುದಾಯದವರೇ ಆದ ಸಿ.ಎಚ್‌.ವಿಜಯಶಂಕರ್‌ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

ಹೀಗಾಗಿ, ಈ ಕ್ಷೇತ್ರವು ಕಾಂಗ್ರೆಸ್‌ ಅಭ್ಯರ್ಥಿಗಿಂತ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಪಾಲಿಗೆ ಅಗ್ನಿಪರೀಕ್ಷೆ ಆಗಿತ್ತು. ಆದರೆ, ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಎದುರು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ವಿಜಯಶಂಕರ್‌ ಸೋತಿದ್ದು, ಮತ್ತೆ ಮುಜುಗರ ಅನುಭವಿಸುವಂತಾಗಿದೆ. ಸೋಲಿಗೆ ಈಗ ಎಲ್ಲರೂ ಬೊಟ್ಟು ಮಾಡುತ್ತಿರುವುದು ಸಿದ್ದರಾಮಯ್ಯ ಕಡೆಗೆ. 2014ರಲ್ಲಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಈ ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗಿತ್ತು.

‘ಇದು ಕಾಂಗ್ರೆಸ್‌ ಸೋಲಿಗಿಂತ ಸಿದ್ದರಾಮಯ್ಯನವರಿಗೆ ಉಂಟಾದ ದೊಡ್ಡ ಹಿನ್ನಡೆ. ರಾಜ್ಯ ರಾಜಕಾರಣದಲ್ಲಿ ಹಾಗೂ ಹೈಕಮಾಂಡ್‌ ಮಟ್ಟದಲ್ಲಿ ಅವರ ಪ್ರಭಾವ ಕುಗ್ಗಲಿದೆ. ಚಾಮಂಡೇಶ್ವರಿ ಕ್ಷೇತ್ರದ ಸೋಲಿಗೆ ಸೇಡು ತೀರಿಸಿಕೊಳ್ಳಲು ಮುಂದಾಗಿ, ವಿರೋಧಿಗಳು ತೋಡಿದ ಖೆಡ್ಡಾಕ್ಕೆ ಬಿದ್ದಿದ್ದಾರೆ’ ಎಂದೇ ಕಾಂಗ್ರೆಸ್‌ನ ಹಿರಿಯ ರಾಜಕಾರಣಿಯೊಬ್ಬರು ವಿಶ್ಲೇಷಿಸುತ್ತಾರೆ.

ಈ ಭಾಗದ ಪ್ರಮುಖ ನಾಯಕರಾದ ವಿ.ಶ್ರೀನಿವಾಸಪ್ರಸಾದ್‌, ಎಚ್‌.ವಿಶ್ವನಾಥ್‌ ಹಾಗೂ ಜಿ.ಟಿ.ದೇವೇಗೌಡರು ವಿಧಾನಸಭೆ ಚುನಾವಣೆಗೂ ಮೊದಲಿನಿಂದ ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ಳಲು ತೊಡೆ ತಟ್ಟುತ್ತಲೇ ಇದ್ದರು. ಒಂದಿಲ್ಲೊಂದು ಸ್ವರೂಪದಲ್ಲಿ ಅವರನ್ನು ಕೆಣಕುತ್ತಲೇ ಬಂದರು.

ಈ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಿ.ಟಿ.ದೇವೇಗೌಡ ಸಾಕಷ್ಟು ಪ್ರಯತ್ನ ನಡೆಸಿದ್ದರು. ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ‘ದೊಡ್ಡ ಗೌಡರ’ ಸ್ಪರ್ಧೆ ವಿಚಾರವನ್ನೇ ಮುಂದಿಟ್ಟಿದ್ದರು. ಆದರೆ, ಸಿದ್ದರಾಮಯ್ಯ ಹಟದ ಮುಂದೆ ಕೈಚೆಲ್ಲಿದ್ದರು. ಈಗ ನೋಡಿದರೆ ಅವರು ಪ್ರತಿನಿಧಿಸುವ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಮೈತ್ರಿ ಅಭ್ಯರ್ಥಿಗೆ ಹಿನ್ನಡೆಯಾಗಿದೆ.

‘ಕೈ’ಹಿಡಿಯದ ಜೆಡಿಎಸ್‌:

ಕೆಲವೆಡೆ ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಜಿಟಿಡಿ ಹೇಳಿಕೆ ನಿಜವಾದಂತಿದೆ. ‘ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಕಾಂಗ್ರೆಸ್‌ ಸಹಕರಿಸಿದರೆ ಮಾತ್ರ ಮೈಸೂರಿನಲ್ಲಿ ಕಾಂಗ್ರೆಸ್‌ಗೆ ಸಹಕಾರ ಸಿಗಲಿದೆ’ ಎಂಬ ಸಾ.ರಾ.ಮಹೇಶ್‌ ಹೇಳಿಕೆ ಈಗಿನ ಫಲಿತಾಂಶಕ್ಕೆ ಹಿಡಿದ ಕನ್ನಡಿಯಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT