ಮೈಸೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ವರ್ಗಾವಣೆಗೆ ಸರ್ಕಾರದ ಧಾರ್ಮಿಕ ಅಸಹಿಷ್ಣುತೆಯೇ ಕಾರಣ ಎಂದು ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಆರೋಪಿಸಿದರು.
‘ಬಕ್ರೀದ್ ಸಂದರ್ಭದಲ್ಲಿ ಜಾನುವಾರು ಸಾಗಾಣಿಕೆದಾರರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕ್ರಮ ಜರುಗಿಸುವಂತೆ ಅವರು ಈಚೆಗಷ್ಟೇ ಆದೇಶ ಹೊರಡಿಸಿದ್ದರು. ಹೀಗಾಗಿಯೇ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ’ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ಕಾರಕ್ಕೆ ಸೈರಣೆ ಎಂಬುದಿಲ್ಲ. ಮೊದಲು ಟಿಪ್ಪು ಜಯಂತಿಯನ್ನು ರದ್ದು ಮಾಡಿತು. ಈಗ ಶಾಲಾ ಪಠ್ಯದಿಂದ ಟಿಪ್ಪು ಚರಿತ್ರೆಯನ್ನೇ ಕೈಬಿಟ್ಟಿದೆ. ಇದರ ವಿರುದ್ಧ ತೀವ್ರತರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.
ಟಿಪ್ಪು ಕಟ್ಟಿಸಿದ ಕೆರೆಗಳನ್ನು ನಿರ್ವಹಣೆ ಮಾಡಲಾಗದ ಸರ್ಕಾರ ಟಿಪ್ಪುವಿನ ಹೆಸರಿಗೆ ಮಸಿ ಬಳಿಯುತ್ತಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಇಂತಹ ರಾಜಕೀಯ ಬೇಕಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಇಡಲಿಲ್ಲ. ಟಿಪ್ಪು ವಿಚಾರದಲ್ಲಿ ಅವರದ್ದು ಮೊಸಳೆ ಕಣ್ಣೀರು ಎಂದು ಟೀಕಿಸಿದರು.