ಮೈಸೂರು: ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯ ಸೋಮವಾರ ಬಿರುಸುಗೊಂಡಿತು. ಸಚಿವ ಎಸ್.ಟಿ.ಸೋಮಶೇಖರ್ ಬಿಜೆಪಿ ಪರವಾಗಿ ದಿನವಿಡಿ ಪ್ರಚಾರ ನಡೆಸಿದರೆ, ಜೆಡಿಎಸ್ ತನ್ನ ನೂತನ ಕಚೇರಿಯನ್ನು ತೆರೆಯಿತು.
ಬಹುಜನ ಸಮಾಜ ಪಕ್ಷವು ಚುನಾವಣಾ ಸಂಬಂಧ ಉನ್ನತಮಟ್ಟದ ಸಭೆ ನಡೆಸಿತು. ಎಸ್ಡಿಪಿಐ ರಫತ್ಉಲ್ಲಾ ಖಾನ್ ನಾಮಪತ್ರ ಸಲ್ಲಿಸಿ, ಅಧಿಕೃತವಾಗಿ ಚುನಾವಣಾ ಕಣಕ್ಕೆ ಧುಮುಕಿದರೆ, ಕರ್ನಾಟಕ ರಾಜ್ಯ ರೈತ ಸಂಘ, ಸ್ವರಾಜ್ ಇಂಡಿಯಾ ಸೇರಿದಂತೆ ಪ್ರಗತಿ ಪರ ಸಂಘಟನೆಗಳು ಪ್ರಸನ್ನ ಎನ್ ಗೌಡ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದವು.
ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಎಸ್.ಟಿ.ಸೋಮಶೇಖರ್ ಅವರು ನಗರದ ನಾನಾ ಭಾಗಗಳಿಗೆ ತೆರಳಿ ಪದವೀಧರರು, ಶಿಕ್ಷಕರನ್ನು ಭೇಟಿ ಮಾಡಿ ಮತ ಯಾಚಿಸಿದರು.
ಸಾಮಾನ್ಯವಾಗಿ ಚುನಾವಣೆಯಲ್ಲಿ ಸೋತ ಬಳಿಕ ಅಭ್ಯರ್ಥಿಗಳು ಜನರ ಬಳಿಗೆ ಹೋಗುವುದಿಲ್ಲ. ಆದರೆ, ರವಿಶಂಕರ್ ಕಳೆದ ಬಾರಿಯ ಚುನಾವಣೆ ಯಲ್ಲಿ ಕೇವಲ 160 ಮತಗಳ ಅಂತರದಿಂದ ಸೋಲುಂಡರೂ ಆರು ವರ್ಷಗಳಿಂದ ಜನರ ದನಿಯಾಗಿ ಕೆಲಸ ಮಾಡುತ್ತಿ ದ್ದಾರೆ ಎಂದು ವಿವಿಧೆಡೆ ಹೇಳಿದರು.
ಮೈಸೂರು ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದ ಅವರು, ಪದವೀಧರರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಇದ್ದರು.