ಮೈಸೂರು: ‘ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಲುಮುಂಬರುವ ದಿನಗಳಲ್ಲಿ ಪ್ರಯತ್ನಿಸುತ್ತೇನೆ’ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಕನ್ನಡ ಚಳವಳಿ ಕೇಂದ್ರ ಸಮಿತಿ, ‘ಕನ್ನಡ ಬೆಳಕು’ ವಾರಪತ್ರಿಕೆ ಹಾಗೂ ಮೈಸೂರು ಶರಣ ಮಂಡಲಿ ವತಿಯಿಂದ ರೂಪಿಸಲಾದ ಕನ್ನಡ ಅಂಕಿಗಳುಳ್ಳ ವಿನೂತನ ಕ್ಯಾಲೆಂಡರ್ನ್ನು ಗುರುವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಮೈಸೂರು ಶರಣ ಮಂಡಲಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಅವರು ಕನ್ನಡದ ಪರ ಅನೇಕ ಹೋರಾಟಗಳನ್ನು ಮಾಡಿದ್ದಾರೆ’ ಎಂದು ಪ್ರತಾಪಸಿಂಹ ಶ್ಲಾಘಿಸಿ ಕುಳಿತು ಕೊಳ್ಳುವಾಗ ಮಧ್ಯಪ್ರವೇಶಿಸಿದ ಮೂಗೂರು ನಂಜುಂಡಸ್ವಾಮಿ ‘ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಈ ಕುರಿತು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಹೊಸ ಹೊಸ ರೈಲುಗಳನ್ನು, ವಿಮಾನಗಳನ್ನು ಮೈಸೂರಿಗೆ ತಂದಿರುವುದರ ಸಂಬಂಧ ಅಭಿನಂದನಾ ನುಡಿಗಳನ್ನಾಡಿದ ಮೂಗೂರು ನಂಜುಂಡಸ್ವಾಮಿ ಪ್ರತಾಪ್ ಸಿಂಹ ಅವರನ್ನು ಸನ್ಮಾನಿಸಿದರು.
ಶಾಸಕ ಎಲ್.ನಾಗೇಂದ್ರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು, ಸಮಾಜಸೇವಕರಾ ಮಡ್ಡಿಕೆರೆ ಗೋಪಾಲ್, ರಘುರಾಂ ವಾಜಪೇಯಿ ಇದ್ದರು.