ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಗದ್ದುಗೆ ಏರಲು ‘ಅಭಿವೃದ್ಧಿ ರಾಜಕಾರಣ’

ಹೊಸ ಜಿಲ್ಲೆಯಾಗಿ 2 ದಶಕ ಕಳೆದರೂ ಮುಂದುವರಿದಿವೆ ಹಳೇ ಸಮಸ್ಯೆಗಳು
Last Updated 15 ಮಾರ್ಚ್ 2018, 19:52 IST
ಅಕ್ಷರ ಗಾತ್ರ

ಗದಗ: ಗದಗ ವಿಧಾನಸಭಾ ಕ್ಷೇತ್ರ, ಆರು ದಶಕಗಳಲ್ಲಿ ರಾಜಕಾರಣದ ಹಲವು ಮಜಲುಗಳನ್ನು ಕಂಡಿದೆ. ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ ಅವರ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿದೆ.

ಸತತ ಎರಡು ದಶಕಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ‘ಸೋಲಿಲ್ಲದ ಸರದಾರ’ ಎಂದು ಹೆಸರು ಪಡೆದಿದ್ದ ಪಾಟೀಲ ಅವರು, ಮುಖ್ಯಮಂತ್ರಿ ಅಭ್ಯರ್ಥಿ ಎಂದು ಗುರುತಿಸಿಕೊಂಡು 2008ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಕೆಲ ತಿಂಗಳಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲೂ ಸೋತಿದ್ದರು.

ಅನಿರೀಕ್ಷಿತ ಸೋಲಿನ ಬಳಿಕ, ಈ ಭಾಗದ ಬಹುದೊಡ್ಡ ಸಮಸ್ಯೆಯಾದ ಕುಡಿಯುವ ನೀರಿನ ಬವಣೆ ತಪ್ಪಿಸಲು ಫ್ಲೋರೈಡ್‌ಯುಕ್ತ ನೀರನ್ನು ಶುದ್ಧೀಕರಿಸುವ ‘ಶುದ್ಧ ನೀರಿನ ಘಟಕ’ಗಳನ್ನು ಸ್ಥಾಪಿಸಿ, ₹ 2ಕ್ಕೆ 20 ಲೀಟರ್‌ ನೀರು ಕೊಡುವ ಮೂಲಕ ಕ್ಷೇತ್ರದ ಜನರಿಗೆ ಹತ್ತಿರವಾದರು. 2013ರಲ್ಲಿ ಎರಡನೆಯ ಪ್ರಯತ್ನದಲ್ಲಿ ಯಶಸ್ವಿಯಾಗಿ, ಗ್ರಾಮೀಣಾಭಿವೃದ್ಧಿ ಸಚಿವರೂ ಆದರು.

ಹಾಗೆ ನೋಡಿದರೆ, ಗದಗ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಕಾಂಗ್ರೆಸ್ಸೇತರ ಅಭ್ಯರ್ಥಿಗಳಿಗೆ ಇಲ್ಲಿನ ಮತದಾರರು ಮಣೆ ಹಾಕಿದ್ದು ಕಡಿಮೆ. ಎಚ್‌.ಕೆ ಪಾಟೀಲ ಅವರ ತಂದೆ ಕೆ.ಎಚ್. ಪಾಟೀಲ ಅವರು ನಾಲ್ಕು ಬಾರಿ ಶಾಸಕರಾಗಿ ಕ್ಷೇತ್ರವನ್ನು (18 ವರ್ಷ) ಪ್ರತಿನಿಧಿಸಿದ್ದಾರೆ. ಅವರಿಗೆ ಮುಖ್ಯಮಂತ್ರಿ ಪಟ್ಟದ ಯೋಗ ಅರಸಿ ಬಂದಿತ್ತಾದರೂ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸ್ವಲ್ಪದರಲ್ಲೇ ಆ ಸ್ಥಾನ ಕೈ ತಪ್ಪಿತು.

1992ರಲ್ಲಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಸಹೋದರನ ಪುತ್ರ ಡಿ.ಆರ್.ಪಾಟೀಲ ಸ್ಪರ್ಧಿಸಿ ಜಯ ಗಳಿಸಿದರು. ನಂತರದ ಮೂರೂ ಅವಧಿಗೆ (17 ವರ್ಷ) ಅವರೇ ಆಯ್ಕೆಯಾದರು. ಒಟ್ಟಿನಲ್ಲಿ 1957ರಲ್ಲಿ ನಡೆದ ಮೊದಲ ಚುನಾವಣೆಯಿಂದ ಹಿಡಿದು ಇಲ್ಲಿಯವರೆಗಿನ 14 ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಆಯ್ಕೆಯಾಗಿ
ದ್ದಾರೆ. ಕೆ.ಎಚ್.ಪಾಟೀಲ ಕುಟುಂಬದವರೇ 9 ಬಾರಿ ಆಯ್ಕೆ ಆಗಿರುವುದು ಈ ಕ್ಷೇತ್ರದ ವಿಶೇಷ.

ತುರ್ತು ಪರಿಸ್ಥಿತಿ ನಂತರ, 1978ರಲ್ಲಿ ಜಯಪ್ರಕಾಶ ನಾರಾಯಣ ಪಾರ್ಟಿಯಿಂದ ಸ್ಪರ್ಧಿಸಿದ್ದ ಸಿ.ಎಸ್.ಮುತ್ತಿನಪೆಂಡಿಮಠ ಅವರು ಕೆ.ಎಚ್.ಪಾಟೀಲ ವಿರುದ್ಧ ಗೆಲುವು ಸಾಧಿಸಿದರು. 1983ರಲ್ಲೂ ಅವರೇ ಜನತಾ ಪಕ್ಷದಿಂದ ಗೆಲುವು ಕಂರು. ಆ ಬಳಿಕ 7 ಚುನಾವಣೆಗಳ ನಂತರ ಅಂದರೆ 2008ರಲ್ಲಿ ಗದಗದಲ್ಲಿ ಮೊದಲ ಬಾರಿ ಕಮಲ ಅರಳಿತು. ಇದರ ಹಿಂದೆ ಆಗ (2007) ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀರಾಮುಲು ಅವರ ಪ್ರಭಾವ ದಟ್ಟವಾಗಿತ್ತು. ಕ್ಷೇತ್ರದ ನೀರಿನ ಸಮಸ್ಯೆ ನೀಗಿಸಲು ಶ್ರೀರಾಮುಲು ಕೈಗೊಂಡಿದ್ದ ಕ್ರಮಗಳು ಬಿಜೆಪಿ ಅಭ್ಯರ್ಥಿ ಶ್ರೀಶೈಲಪ್ಪ ಬಿದರೂರ ಅವರ ಗೆಲುವಿನ ಹಾದಿಯನ್ನು ಸುಗಮಗೊಳಿಸಿದವು.

2013ರಲ್ಲಿ ಚತುಷ್ಕೋನ ಸ್ಪರ್ಧೆ ನಡೆಯಿತು. ಶಾಸಕ ಶ್ರಿಶೈಲಪ್ಪ ಬಿದರೂರ (ಬಿಜೆಪಿ), ಅನಿಲ ಮೆಣಸಿನಕಾಯಿ (ಬಿಎಸ್ಆರ್) ಮತ್ತು ಎಸ್.ಬಿ.ಸಂಕಣ್ಣವರ (ಕೆಜೆಪಿ) ಕಣದಲ್ಲಿದ್ದರು. ಬಿ.ಎಸ್‌.ಯಡಿಯೂರಪ್ಪ ಅವರ ಸಂಬಂಧಿಕರ ಊರು ಗದಗ. ಅವರೇ ಕೆಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಆದರೆ, ಮತದಾರರ ತೀರ್ಪು ಎಚ್‌.ಕೆ.ಪಾಟೀಲ ಪರವಾಗಿತ್ತು.

ಹಳೆಯ ಸಮಸ್ಯೆಗಳು: ಗದಗ ಜಿಲ್ಲೆಯಾದ ಬಳಿಕ, ಅಂದರೆ ಕಳೆದ ಎರಡು ದಶಕಗಳಲ್ಲಿ 15 ವರ್ಷ ಕಾಂಗ್ರೆಸ್‌ ಮತ್ತು 5 ವರ್ಷ ಬಿಜೆಪಿ ಈ ಕ್ಷೇತ್ರವನ್ನು ಆಳಿವೆ. ಆದರೆ, ನೀರಿನ ಬವಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹಿಂದೆ ಧಾರವಾಡ ಜಿಲ್ಲೆಯ ಭಾಗವಾಗಿದ್ದಾಗ ಗದಗ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿತ್ತೋ, ಈಗಲೂ ಆ ಎಲ್ಲ ಸಮಸ್ಯೆಗಳನ್ನು ಎದುರಿಸುತ್ತಿದೆ. ವರ್ಷದ ಹಿಂದಷ್ಟೇ ಗದಗದಲ್ಲಿ 24x7 ನಿರಂತರ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ. ಸದ್ಯ ಕೆಲವು ವಾರ್ಡ್‌ಗಳಿಗೆ ನಿರಂತರ ನೀರು ಪೂರೈಕೆಯಾಗುತ್ತಿದೆ. ಇನ್ನುಳಿದ ಕಡೆ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಜಿಲ್ಲೆಯ ಒಂದು ಬದಿ ತುಂಗಭದ್ರಾ, ಮತ್ತೊಂದು ಬದಿ ಮಲಪ್ರಭಾ ನದಿ ಹರಿಯುತ್ತಿ
ದ್ದರೂ ಅದರ ಪ್ರಯೋಜನ ಕ್ಷೇತ್ರದ ರೈತರಿಗೆ ಲಭಿಸಿಲ್ಲ. ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ತುಂಗಭದ್ರಾ ನದಿ ನೀರಿನ ಮೂಲಕ ಕೆರೆಗಳನ್ನು ತುಂಬಿಸಿ, ಆ ನೀರನ್ನು ಕೃಷಿಗೆ ಬಳಸಿಕೊಳ್ಳುವ ಪ್ರಯತ್ನ ಇತ್ತೀಚಿನ ವರ್ಷಗಳಲ್ಲಿ ನಡೆದಿದೆ.

ಕೃಷಿ ಹೊರತುಪಡಿಸಿದರೆ ಬೇರೆ ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಇಲ್ಲ. ಹೀಗಾಗಿ ಬರ, ಮಳೆ ಕೊರತೆ ಎದುರಾಗುವ ವರ್ಷಗಳಲ್ಲಿ ಈ ಕ್ಷೇತ್ರದ ರೈತರು ದುಡಿಯಲು ಗೋವಾ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಗುಳೆ ಹೋಗುವುದು ಸಾಮಾನ್ಯ.

ವಂಶಾಡಳಿತ ರಾಜಕಾರಣದ ಕಣವಾಗಿದ್ದ ಈ ಕ್ಷೇತ್ರ ಈಗ ಅಭಿವೃದ್ಧಿ ರಾಜಕಾರಣದ ಮೂಲಕವೂ ಗಮನ ಸೆಳೆಯುತ್ತಿದೆ. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನೇ ಮುಂದಿಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್‌ ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ.

ಗ್ರಾಮೀಣಾಭಿವೃದ್ಧಿ ಮೂಲಕ ಗಮನಾರ್ಹ ಬದಲಾವಣೆ

ಗದಗ ಮತಕ್ಷೇತ್ರ ಅಭಿವೃದ್ಧಿ ದೃಷ್ಟಿಯಿಂದ ಉಳಿದ ಕ್ಷೇತ್ರಗಳಿಗೆ ಮಾದರಿ ಆಗಬೇಕು. ಈ ನಿಟ್ಟಿನಲ್ಲಿ ಹೊಸ ಆಲೋಚನೆಯ ಹಲವು ಯೋಜನೆಗಳನ್ನು ಇಲ್ಲಿ ಜಾರಿಗೊಳಿಸಿದ್ದೇವೆ. ಸಮರ್ಪಕ ಕುಡಿಯುವ ನೀರು, ಮೂಲಸೌಕರ್ಯ ಅಭಿವೃದ್ಧಿ ಜತೆಗೆ ಕಲೆ, ಸಾಹಿತ್ಯ, ಕ್ರೀಡೆ ಮತ್ತು ತಂತ್ರಜ್ಞಾನಕ್ಕೆ ಮಹತ್ವ ನೀಡಲಾಗಿದೆ. ಗದಗ ಪರಿಸರದಲ್ಲಿ ಸಾಂಸ್ಕೃತಿಕ ಕ್ರಾಂತಿಯೇ ಆಗಿದೆ.

ಉದ್ಯಾನದಲ್ಲಿ ಉದಯರಾಗ, ಸಂಧ್ಯಾರಾಗ ಕಾರ್ಯಕ್ರಮಗಳು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ವರ್ಷಕ್ಕೆ 100 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದಲ್ಲೇ ಅತಿ ಹೆಚ್ಚು ಜನರು ಉಚಿತ ವೈ–ಫೈ ಸೌಲಭ್ಯ ಬಳಸುತ್ತಿರುವ ನಗರ ಎಂಬ ಹೆಗ್ಗಳಿಕೆ ಗದುಗಿನದು. ವಿಶ್ವದರ್ಜೆ ಗುಣಮಟ್ಟದ ಒಳಾಂಗಣ ಕ್ರೀಡಾಂಗಣ ಇಲ್ಲಿ ನಿರ್ಮಾಣಗೊಂಡಿದೆ. ಗ್ರಾಮೀಣಾಭಿವೃದ್ಧಿಯ ಮೂಲಕ ಹಳ್ಳಿಗರ ಬದುಕಿನಲ್ಲಿ ಗಮನಾರ್ಹ ಬದಲಾವಣೆ ತರಲಾಗಿದೆ. ಕಳೆದ 5 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿಯನ್ನು 1 ನಿಮಿಷದಲ್ಲಿ, ಎರಡು ಸಾಲಿನಲ್ಲಿ ಸಂಕ್ಷಿಪ್ತಗೊಳಿಸಿ ಹೇಳುವುದು ಕಷ್ಟ.

ಎಚ್‌.ಕೆ.ಪಾಟೀಲ, ಗದಗ ಶಾಸಕ– ಸಚಿವ

***

ಬೆಂಗಳೂರಿನಲ್ಲಿ ಸಿದ್ಧಪಡಿಸಿದ ಯೋಜನೆಗಳನ್ನು ಇಲ್ಲಿಗೆ ತಂದರೆ, ಅವು ಇಲ್ಲಿಗೆ ಬರುವಷ್ಟರಲ್ಲೇ ಮಂಜುಗಡ್ಡೆಯಂತೆ ಕರಗಿ ಹೋಗುತ್ತವೆ. ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳಬೇಕು.

ಕವಿತಾ ಕಾಶಪ್ಪನವರ, ಉಪನ್ಯಾಸಕಿ

***

ಇತ್ತೀಚೆಗೆ ಗದಗದಲ್ಲಿ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರವಾಗಿದೆ. ಇನ್ನು ರಸ್ತೆ ದುರಸ್ತಿಗೆ ಆದ್ಯತೆ ನೀಡಬೇಕು. ಅಭಿವೃದ್ಧಿ ಭಾಗ್ಯಗಳು ಜಿಲ್ಲಾ ಕೇಂದ್ರಕ್ಕೆ ಮಾತ್ರ ಸೀಮಿತವಾಗಬಾರದು.

ಚಂದ್ರಶೇಖರ ಹಳ್ಳಿಕಟ್ಟಿಮಠ, ಆಟೊ ಚಾಲಕ

***

ಗದಗ ಮತಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಶಾಲಾ, ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸುವ ಮತ್ತು ಸಮರ್ಪಕ ಕುಡಿಯುವ ನೀರು ಪೂರೈಸುವ ಕೆಲಸವನ್ನು ಆದ್ಯತೆ ಮೇರೆಗೆ ಮಾಡಬೇಕು.

ಅಕ್ಷಯ ಶೋಡೆಕರ, ಪದವಿ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT