ಇತ್ತೀಚಿನ ದಿನಗಳಲ್ಲಿ ಶುಂಠಿ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಶುಂಠಿ ಬಿತ್ತನೆ ಮಾಡಿದ ಬಳಿಕ ಶುಂಠಿ ಬಿಸಿಲಿಗೆ ಒಣಗದ ರೀತಿ ಭತ್ತದ ಹುಲ್ಲನ್ನು ಹಾಕಲಾಗುತ್ತಿತ್ತು. ಆದರೆ, ಭತ್ತದ ಹುಲ್ಲಿನ 1 ಕಂತೆಗೆ ₹ 35 ಆಗಿರುವುದರಿಂದ ಈ ರೈತರು ಹುಲ್ಲಿನ ಬದಲಿಗೆ ಪರ್ಯಾಯವಾಗಿ ಕಬ್ಬಿನ ಸೋಗೆ ಖರೀದಿಗೆ ಮುಂದಾಗಿದ್ದಾರೆ. ಈ ಹಿಂದೆ ಬೆಳೆಗಾರರು ಕಬ್ಬು ಕಟಾವಾದ ಬಳಿಕ ಜಮೀನನ್ನು ಹದಗೊಳಿಸಲು ಸೋಗೆಗೆ ಬೆಂಕಿ ಹಾಕುತ್ತಿದ್ದರು. ನಂತರ ಶುಂಠಿ ಬೆಳೆಗಾರರು ಸೋಗೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಭೂಮಿ ಹಸನಾಗುವುದು ಎಂದು ಬೆಳೆಗಾರರು ಹಣವನ್ನು ಪಡೆಯುತ್ತಿರಲಿಲ್ಲ. ಆದರೆ, ಶುಂಠಿ ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಸೋಗೆಗೆ ಮುಗಿಬಿದ್ದಿದ್ದರಿಂದ ಕಬ್ಬು ಬೆಳೆಗಾರರು ಎಕರೆ ಸೋಗೆಗೆ ಸುಮಾರು ₹ 5 ಸಾವಿರದಿಂದ ₹ 10 ಸಾವಿರದವರೆಗೆ ನಿಗದಿ ಮಾಡಿದ್ದಾರೆ.