ಮೈಸೂರು: ಸರ್ಕಾರದ ವಿರುದ್ಧ ನ. 26ರಂದು ಕರೆ ನೀಡಲಾಗಿರುವ ಅಖಿಲ ಭಾರತ ರೈತ– ಕಾರ್ಮಿಕರ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ನೀಡಲಾಗುವುದು ಎಂದು ಎಡಪಕ್ಷಗಳ ಜಂಟಿ ಸಮಿತಿ ತಿಳಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ಖಂಡಿಸಿ ನಡೆಯುತ್ತಿರುವ ಈ ಮುಷ್ಕರ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ. ಸರ್ಕಾರದ ನೀತಿಗಳು ಬದಲಾಗುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
26ರಂದು ಬೆಳಿಗ್ಗೆ 11 ಗಂಟೆಗೆ ಪುರಭವನದ ಆವರಣದಲ್ಲಿ ಸುಮಾರು 500 ಮಂದಿ ಸೇರಿ ಬಹಿರಂಗ ಸಭೆ ನಡೆಸಲಿದ್ದಾರೆ. ಕೋವಿಡ್ ಕಾರಣ ಒಡ್ಡಿರುವ ಪೊಲೀಸರು ಮೆರವಣಿಗೆಗೆ ಅವಕಾಶ ನಿರಾಕರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಉಪಚುನಾವಣೆಗೆ ಅನುಮತಿ ನೀಡಿ, ಮುಷ್ಕರಕ್ಕೆ ಮಾತ್ರ ತಡೆಯೊಡ್ಡಲಾಗುತ್ತಿದೆ. ಆದರೂ, ಈ ಬಾರಿಯ ಮುಷ್ಕರವು ಹಿಂದಿನ ಎಲ್ಲ ಮುಷ್ಕರಕ್ಕಿಂತಲೂ ಹೆಚ್ಚು ಯಶಸ್ವಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್ ಪರಿಸ್ಥಿತಿಯ ಲಾಭ ಪಡೆದ ಸರ್ಕಾರವು ರೈತ ಮತ್ತು ಕಾರ್ಮಿಕರನ್ನು ದಮನ ಮಾಡುವ ಹಲವು ನೀತಿಗಳನ್ನು ಜಾರಿಗೊಳಿಸಿದೆ. ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕರ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿ ಸುಗ್ರೀವಾಜ್ಞೆಗಳೇ ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದರು.
ಕೆಲವು ಸಂಘಟನೆಗಳು ಈಗಾಗಲೇ ಮುಷ್ಕರಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿವೆ. ಮತ್ತೆ ಕೆಲವು ಸಂಘಟನೆಗಳ ಕಾರ್ಯಕರ್ತರು ತಮ್ಮ ಕಚೇರಿಗಳ ಎದುರೇ ಪ್ರತಿಭಟನೆ ನಡೆಸಲಿದ್ದಾರೆ. ತಾಲ್ಲೂಕು ಕೇಂದ್ರಗಳಲ್ಲಿಯೂ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ 2ನೇ ಸ್ವಾತಂತ್ರ್ಯ ಸಂಗ್ರಾಮ ರೂಪುಗೊಳ್ಳುವುದು ನಿಶ್ಚಿತ ಎಂದರು.
ಸಿಪಿಐ (ಎಂಎಲ್) ಜಿಲ್ಲಾ ಕಾರ್ಯದರ್ಶಿ ಚೌಡಳ್ಳಿ ಜವರಯ್ಯ, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಬಿ.ರಾಮಕೃಷ್ಣ, ಮುಖಂಡರಾದ ಜಗದೀಶ್ಸೂರ್ಯ, ಸೋಮರಾಜಅರಸ್ ಇದ್ದರು.