ಮೈಸೂರು: ಶಿಕ್ಷಕರು ತಮ್ಮನ್ನು ತಾವು ಕೇವಲ ಪಾಠ ಪ್ರವಚನಗಳಿಗೆ ಸೀಮಿತಗೊಳಿಸಿಕೊಳ್ಳದೇ ಮಕ್ಕಳ ವ್ಯಕ್ತಿತ್ವವಿಕಸನಕ್ಕೂ ತುಡಿಯಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಸಲಹೆ ನೀಡಿದರು.
ಸರಸ್ವತಿಪುರಂನಲ್ಲಿರುವ ಎನ್.ಎಸ್.ಎಸ್ ಭವನದಲ್ಲಿಂದು ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪಠ್ಯವನ್ನು ಕಲಿಸುವ ಜತೆಗೆ ವಿದ್ಯಾರ್ಥಿಗಳನ್ನು ಸನ್ನಡತೆ, ಸಂಸ್ಕಾರದಿಂದ ಬದುಕುವಂತೆ ಪ್ರೇರೇಪಿಸಬೇಕು. ಇದು ಶಿಕ್ಷಕರ ಪ್ರಮುಖ ಜವಾಬ್ದಾರಿ. ಪಾಠ ಮಾಡಿ ಮನೆಗೆ ಹೋದರೆ ಯಾವ ಪ್ರಯೋಜನವೂ ಇಲ್ಲ. ಅದರ ಬದಲು ಮಕ್ಕಳೊಂದಿಗೆ ಸೃಜನಾತ್ಮಕವಾಗಿ ತೊಡಗಿಸಿಕೊಳ್ಳಬೇಕು. ಅವರನ್ನು ದೇಶ ಕಟ್ಟುವ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯಂತಹ ಕಾರ್ಯಕ್ರಮಗಳಿಂದ ಸಮಾಜಕ್ಕೆ ಒಳ್ಳೆಯದಾಗುವುದು. ಈ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮಕ್ಕಳು ಸಮಾಜಕ್ಕೆ ಒಳ್ಳೆಯದನ್ನು ನೀಡುತ್ತಾರೆ. ಜತೆಗೆ, ಇದರಿಂದ ವಿಶ್ವವಿದ್ಯಾಲಯಕ್ಕೂ ಒಳಿತಾಗುವುದು ಎಂದು ಅವರು ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಉಪಾಧ್ಯಕ್ಷ ಪ್ರೊ.ಜಿ.ಬಿ.ಶಿವರಾಜು ಮಾತನಾಡಿ, ಶಿಕ್ಷಕರ ತರಬೇತಿ ಕಾರ್ಯಕ್ರಮ ಮಹತ್ವದ್ದು. ಶಿಕ್ಷಕರಲ್ಲಿ ಮೌಲ್ಯಗಳನ್ನು ತುಂಬಿ ಅವರನ್ನು ವಿದ್ಯಾರ್ಥಿಮುಖಿ ಮಾಡುವುದೇ ಈ ರೀತಿಯ ಶಿಬಿರಗಳ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಶಿಕ್ಷಣ ತಜ್ಞ ಪ್ರೊ.ಸತ್ಯನಾರಾಯಣ, ಯುವರಾಜ ಕಾಲೇಜು ನಿವೃತ್ತ ಪ್ರಾಧ್ಯಾಪಕ ಬಿ.ಕೆ.ಜಗದೀಶ್, ಮೈಸೂರು ವಿ.ವಿ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಕೆ.ಕಾಳಚನ್ನೇಗೌಡ, ಡಾ.ಬಿ.ಚಂದ್ರಶೇಖರ್ ಭಾಗವಹಿಸಿದ್ದರು.