ನಂಜನಗೂಡು: ಪಟ್ಟಣದ ಹುಲ್ಲಹಳ್ಳಿ ವೃತ್ತದ ಬಳಿ ಭಾನುವಾರ ಪ್ರಯಾಣಿಕರನ್ನು ಸಾಗಿಸುವ ಟೊಂಪೊ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಪ್ರಯಾಣಿಕರು ತಕ್ಷಣವೇ ವಾಹನದಿಂದ ಇಳಿದಿದ್ದರಿಂದ ಭಾರಿ ಅನಾಹುತ ತಪ್ಪಿತು.
ಅಶೋಕ ಪುರಂ ಬಡಾವಣೆಯ ನಿವಾಸಿಯೊಬ್ಬರಿಗೆ ಸೇರಿದ ಈ ವಾಹನವು ಹುಲ್ಲಹಳ್ಳಿಯಿಂದ ಪ್ರಯಾಣಿಕರನ್ನು ಪಟ್ಟಣಕ್ಕೆ ಕರೆತರುತ್ತಿತ್ತು. ಈ ವೇಳೆ ಹುಲ್ಲಹಳ್ಳಿ ವೃತ್ತದ ಬಳಿ ಬೆಂಕಿ ಕಾಣಿಸಿಕೊಂಡಿತು. ಪ್ರಯಾಣಿಕರೆಲ್ಲರೂ ಕೂಡಲೇ ಕೆಳಗಿಳಿದು ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದರು.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಅಷ್ಟರಲ್ಲಿ ವಾಹನವು ಭಾಗಶಃ ಸುಟ್ಟು ಹೋಗಿತ್ತು. ಬೆಂಕಿಗೆ ವಿದ್ಯುತ್ ಶಾರ್ಟ್ಸರ್ಕೀಟ್ ಕಾರಣ ಎಂದು ಅಂದಾಜು ಮಾಡಲಾಗಿದೆ. ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.