ವರುಣಾ: ಸಮೀಪದ ಚಿಕ್ಕಹಳ್ಳಿ ಬಳಿ ವರುಣಾ ಮುಖ್ಯ ಕಾಲುವೆಯಲ್ಲಿ ಶುಕ್ರವಾರ ಅವರ ತಂದೆಯ ಪಿಂಡ ಪ್ರದಾನ ಸಮಯದಲ್ಲಿ ಕಾಲು ಜಾರಿ ನೀರಿಗೆ ಬಿದ್ದಿದ್ದ ಮೈಸೂರು ಒಂಟಿಕೊಪ್ಪಲಿನ ನಿವಾಸಿ ಶ್ರೀನಿವಾಸ್ (41) ಅವರ ಮೃತದೇಹ ಶನಿವಾರ ಯಾಂದಹಳ್ಳಿ ಬಳಿ ಪತ್ತೆಯಾಗಿದೆ.
ವರುಣಾ ಠಾಣೆಯ ಎಸ್ಐ ಲಕ್ಷ್ಮೀ ಹಾಗೂ ಸಿಬ್ಬಂದಿ ರಾತ್ರಿಯಿಂದಲೇ ನಿಗಾ ವಹಿಸಿ ಎಲ್ಲಾ ಗ್ರಾಮಗಳಿಗೆ ಮಾಹಿತಿ ನೀಡಿದ್ದರು.
ವರುಣಾ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಈಜು ಪರಿಣಿತರು ಶನಿವಾರ ಸ್ಥಳಕ್ಕೆ ಧಾವಿಸಿ ಬೆಳಗಿನಿಂದ ಶೋಧನಾ ಕಾರ್ಯ ಆರಂಭಿಸಿದರು. ಕಾಲು ಜಾರಿ ಬಿದ್ದ ಸ್ಥಳದಿಂದ ಸುಮಾರು 5 ಕಿ.ಮೀ ದೂರದ ಯಾಂದಹಳ್ಳಿ ಸೇತುವೆ ಬಳಿ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಶವ ದೊರೆಯಿತು.
ಶ್ರೀನಿವಾಸ್ ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಮೃತ ದೇಹವು ಯಾಂದಹಳ್ಳಿ ಪತ್ತೆಯಾಗಿದ್ದರಿಂದ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರುಣಾ ಠಾಣೆಯ ಎಸ್ಐ ಲಕ್ಷ್ಮೀ ತಿಳಿಸಿದರು.