ಮೈಸೂರು: ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಸಂಸ್ಕೃತ ಪಠ್ಯಪುಸ್ತಕ ಬಿಡುಗಡೆ ಹಾಗೂ ನಿವೃತ್ತರಾದ ಪ್ರಾಂಶುಪಾಲರಿಗೆ ಬೀಳ್ಕೊಡುಗೆ ನೀಡುವ ಸಮಾರಂಭ ನಡೆಯಿತು.
ಪ್ರಾಂಶುಪಾಲ ಪ್ರೊ.ಎಸ್.ಬಿ.ಶಾಂತಪ್ಪನವರ್ ನಿವೃತ್ತರಾಗಿದ್ದರಿಂದ ಕಾಲೇಜಿನ ಅಧ್ಯಾಪಕರ ಸಂಘದ ವತಿಯಿಂದ ಕಲಾಮಂಟಪದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು. ಅವರ ಸೇವೆ ಸ್ಮರಿಸಿ ಸನ್ಮಾನಿಸಲಾಯಿತು.
ಇದೇ ವೇದಿಕೆಯಲ್ಲಿ ಡಾ.ಡಿ.ಶೀಲಾ ಕುಮಾರಿ ಸಂಪಾದಿಸಿದ ಕಾವ್ಯ ಭೂಮಿಕಾ–2 (ದ್ವಿತೀಯ ಬಿ.ಎಸ್ಸಿ ಪಠ್ಯಪುಸ್ತಕ) ಮತ್ತು ಕಾವ್ಯ ಪ್ರಮೋದ–2 (ದ್ವಿತೀಯ ಬಿ.ಸಿಎ ಪಠ್ಯಪುಸ್ತಕ) ಸಂಸ್ಕೃತ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಕೃತಿ ಬಿಡುಗಡೆ ಮಾಡಿದ ಪ್ರೊ.ಎಸ್.ಬಿ.ಶಾಂತಪ್ಪನವರ್ ‘ಕಾಲೇಜಿನ ಸಂಸ್ಕೃತ ವಿಭಾಗವು ಹಲವಾರು ಒಳ್ಳೆಯ ಯೋಜನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ’ ಎಂದು ಹೇಳಿದರು.
ಪ್ರಾಂಶುಪಾಲ ಡಾ.ದಯಾನಂದ್ ಮಾತನಾಡಿ ‘ಕಾಲೇಜಿನ ಏಳಿಗೆಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ’ ಎಂದರು.
ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ.ಶಿವಲಿಂಗಯ್ಯ ಸ್ವಾಗತಿಸಿದರು. ಖಜಾಂಚಿ ಡಾ.ಬಿ.ಜಯಲಕ್ಷ್ಮೀ ನಿರೂಪಿಸಿದರು. ಪಿ.ಆರ್.ವನಿತಾ, ದೀಪಾ ಆರ್.ಹೆಬ್ಬಾರ ಪ್ರಾರ್ಥಿಸಿದರು. ಬಿ.ಎನ್.ಸಂತೋಷ್ ಕುಮಾರ್ ವಂದಿಸಿದರು.